Wednesday 26 July 2017

ವ್ಯಾಕುಲ

ವ್ಯಾಕುಲ
"ಮೂಕಾಂಬಿಕಾ......",ಹಿರಿಯ ವ್ಯವಸ್ಥಾಪಕಿ ಸುನಂದ ಕರೆದಾಗ ಸರತಿ ಸಾಲಿನಲ್ಲಿ ಕುಳಿತಿದ್ದ ನಾಲ್ಕಾರು ಯುವತಿಯರಲ್ಲಿ ಒಬ್ಬಳು ಆಕೆಯ ಕೋಣೆಗೆ ಹೋದಳು.ಕೋಣೆಯಲ್ಲಿ ಹಾಕಿದ್ದ ಕುರ್ಚಿಯ ಮೇಲೆ ಕುಳಿತಿದ್ದ ಶ್ರೀಮಂತ ದಂಪತಿಯ ಎದುರಿಗೆ ಹೋಗಿ ತನ್ನ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿದಳು."ಇವಳು ಮೂಕಾಂಬಿಕಾ.....ಈಕೆಯದೇ ನಿಮ್ಮ ಮಗುವನ್ನು ಹೆರಬಹುದಾದ ಸೂಕ್ತ ಗರ್ಭ....ಒಪ್ಪಿಗೆಯಿದ್ದಲ್ಲಿ ಮುಂದಿನದನ್ನು ಮಾತನಾಡೋಣ.." ಎಂಬ ಸುನಂದಾಳ ಮಾತಿಗೆ,ಮೂಕಾಂಬಿಕೆಯನ್ನೊಮ್ಮೆ ನೋಡಿದ ಸಿರಿವಂತರು ಒಪ್ಪಿಗೆ ಎಂಬಂತೆ 'ಆಲಯ' ದ ವ್ಯವಸ್ಥಾಪಕಿಯ ಕಡೆಗೆ ತಿರುಗಿ ತಲೆಯಲ್ಲಾಡಿಸಿದರು."ನೀನಿನ್ನು ಹೋಗಬಹುದು..." ಎಂದ ಸುನಂದಾ "ಹಾಗೆಯೇ ನಿನ್ನ ಗೆಳತಿಯರನ್ನು ಅವರವರ ಕೋಣೆಗೆ ಹೋಗೋದಕ್ಕೆ ಹೇಳು.." ಎಂದೂ ಸೇರಿಸಿದಳು.
ಮೂಕಾಂಬಿಕೆ,ಸುಮಾರು ಇಪ್ಪತ್ತಾರು ವರ್ಷದ ಹೆಣ್ಣುಮಗಳು.ಎಣ್ಣೆಗಪ್ಪು ಮೈಬಣ್ಣ,ಆಕರ್ಷಕವಾದ ಕಣ್ಣುಗಳು,ತುಂಬಿಕೊಂಡ ಕೆನ್ನೆಗಳು ಇವೆಲ್ಲಕ್ಕೂ ಮುಕುಟವೇನೋ ಎಂಬಂತಹ ಆಕೆಯ ಮುಗ್ದವಾದ ಮುಗುಳುನಗೆ.ಇದೆಲ್ಲಕ್ಕಿಂತ ಹೆಚ್ಚಾಗಿ ಫಲವತ್ತಾದ ಆರೋಗ್ಯಕರ ಗರ್ಭ.ಆಕೆಯಲ್ಲಿ ಅದಾಗಲೇ ಹುಟ್ಟಿದ್ದ ಎರಡು ಸಿರಿವಂತರ ಜೀವಗಳು ಗಟ್ಟಿಮುಟ್ಟಾಗಿದ್ದವು.'ಆಲಯ' ದಲ್ಲಿ ಇದ್ದ ಬಾಡಿಗೆ ತಾಯಂದಿರಲ್ಲಿ ಒಬ್ಬಳು.ಮೇಲಾಗಿ ಬಹುಬೇಡಿಕೆಯ ಹಾಗೂ ಸ್ವಲ್ಪ ಹೆಚ್ಚೇ ದುಬಾರಿಯೆಂದೆನಿಸುವ ತಾಯಿ.
ಮೂರು ವರ್ಷಕ್ಕೆ ಒಂದು ಮಗುವನ್ನು ಹೆರುತ್ತಿದ್ದಳು ಮೂಕಾಂಬಿಕೆ.ಸದಾ ಅಂತರ್ಮುಖಿ.ಯಾರೊಡನೆಯೂ ಹೆಚ್ಚು ಮಾತಿಲ್ಲ.ಗರ್ಭ ಧರಿಸಿ ಮೂರು ತಿಂಗಳ ಅನಂತರದ ಒಂದು ವರ್ಷಗಳ ಕಾಲ,ಆಕೆಗೆ ರಾಜಾತಿಥ್ಯ.ಹುಟ್ಟುವ ಮಗು ಆರೋಗ್ಯವಾಗಿರಬೇಕು ಎಂಬ ಉದ್ದೇಶದಿಂದ ಆಕೆಗೆ ಬಸಿರಿನ ಕಾಲದಲ್ಲಿ ಹಣ್ಣು ಹಂಪಲನ್ನು ಯಥೇಚ್ಛವಾಗಿ ಕೊಡುತ್ತಿದ್ದರು.ಮಗುವಿನ ಜನನದ ನಂತರ ಮತ್ತದೇ ರೀತಿಯ ಉಪಚಾರ.ಆದರೆ ಈ ಬಾರಿ ಮೊಲೆಯಲ್ಲಿ ಯಥೇಚ್ಛವಾಗಿ ಹಾಲು ದೊರೆಯಬೇಕೆಂಬ ಉದ್ದೇಶದಿಂದ.ಎರಡೂ ಹಂತದಲ್ಲಿ ಪ್ರಧಾನವಾದದ್ದು ಆಕೆಯ ಗರ್ಭವೇ ಹೊರತು ಆಕೆಯಲ್ಲ.ಮಿಥುನದ ಸುಖವೇ ಇಲ್ಲದೆ ತಾಯ್ತನದ ತಿಳಿಯಾದ ಆನಂದವನ್ನು ಅನುಭವಿಸುತ್ತಿದ್ದಳು ಮೂಕಾಂಬಿಕೆ.ಸುಮಾರು ಎಂಟು ತಿಂಗಳು ತನ್ನ ರಕ್ತವನ್ನು ಹಾಲಾಗಿ ಬಸಿದು ಎಳೆ ಕಂದಮ್ಮಗಳ ಹೊಟ್ಟೆ ತುಂಬಿಸಿ,ಒಂಬತ್ತನೆ ತಿಂಗಳು ಆ ಎಳೆ ಜೀವವನ್ನು ಅದರ ನಿಜವಾದ ವಾರಸುದಾರರಿಗೆ ಕೊಡುವಾಗ,ಆಕೆಯ ಕರುಳು ಕಿತ್ತು ಬರುತ್ತಿತ್ತು.ಆದರೆ ಅದು ತನ್ನ ಕರ್ತವ್ಯ ಎಂದುಕೊಂಡು ಆಕೆ ಒಬ್ಬಳೆ ಮರುಗಿ ಸುಮ್ಮನಾಗುತ್ತಿದ್ದಳು.
'ಆಲಯ'ದಲ್ಲಿ ಬಾಡಿಗೆ ತಾಯಿಯಾಗಿದ್ದವರು ಒಮ್ಮೆ ಮಗುವನ್ನು ಹೆತ್ತು ಕೊಟ್ಟ ಮೇಲೆ ಮತ್ತೆ ಆ ಮಗುವಿನ ಮುಖ ನೋಡಬಾರದೆಂಬ ಷರತ್ತನ್ನು ಹೊಂದಿದ ಲಿಖಿತ ಅಗ್ರಿಮೆಂಟೊಂದನ್ನು ಸಹಿ ಮಾಡಬೇಕಿತ್ತು.ಅದರಲ್ಲಿ ಇನ್ನು ಎಷ್ಟೋ ಷರತ್ತುಗಳು ಇದ್ದವಂತೆ,ಆದರೆ ಮೂಕಾಂಬಿಕೆಗೆ ಇಷ್ಟು ಮಾತ್ರ ಹೇಳಲಾಗಿತ್ತು.ಓದು-ಬರಹ ಬರದ ಆಕೆ,ತನ್ನ ಬೆರಳಚ್ಚನ್ನು ಅಂತಹ ಕಾಗದಗಳಿಗೆ ಸಹಿಯ ರೂಪದಲ್ಲಿ ನೀಡುತ್ತಿದ್ದಳು.
ಹೆರಿಗೆಯ ನೋವನ್ನು ಅನುಭವಿಸುವ ಧೈರ್ಯವಿಲ್ಲದೆಯೋ,ಅಥವಾ ಮಗು ಹೆರಲು ಸಮಯವಿಲ್ಲದೆಯೋ ಏನೋ,ತಮ್ಮ ಮಗುವನ್ನು ಬೇರೆಯವರ ಗರ್ಭದಲ್ಲಿ ಬೆಳೆಸುವ ಸಿರಿವಂತರ ಪಾಲಿನ ತಾಯಿ ಮೂಕಾಂಬೆ.ಆಕೆಗೆ ತನ್ನ ತಂದೆ-ತಾಯಿಯರು ಮೂಕಾಂಬೆ ಎಂಬ ಹೆಸರನ್ನು ಯಾಕಾಗಿ ಇಟ್ಟರೋ ಗೊತ್ತಿಲ್ಲ.ಆದರೆ ಆಕೆಗೆ ಮಾತ್ರ ಆ ಹೆಸರು ಅನ್ವರ್ಥವೇನೋ ಎಂಬಂತೆ ಇತ್ತು.ಯಾರೊಡನೆಯು ಹೆಚ್ಚು ಮಾತಿಲ್ಲ.ಎಲ್ಲಿಯೂ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿರಲಿಲ್ಲ.ಪ್ರತಿ ಬಾರಿ ಬಸುರಿಯಾದಾಗಲೂ,ಅದು ತನ್ನದೇ ಮಗು ಎಂಬಂತಹ ಅವ್ಯಕ್ತ ಭಾವ.ಕೋಗಿಲೆಯು ತನ್ನ ಮರಿಯನ್ನು ಪೋಷಿಸುವ ಮನಸ್ಸಿಲ್ಲದೆ ಅದನ್ನು ಕಾಗೆಯ ಗೂಡಿನಲ್ಲಿ ಇಡುವುದಂತೆ.ಇದನ್ನು ಅರಿಯದ ಕಾಗೆ ಅದು ತನ್ನದೆ ಮೊಟ್ಟೆ ಎಂದು ಅರಿತು ಕಾವು ಕೊಟ್ಟು ಮರಿ ಮಾಡುವುದಂತೆ,ಅದೇ ರೀತಿ ಮೂಕಾಂಬಿಕೆಯ ಪರಿಸ್ಥಿತಿಯೂ ಕೂಡ.ಆದರೆ ಈಕೆಗೆ ಅದು ತನ್ನ ಮಗುವಲ್ಲ ಎಂಬ ಅರಿವು ಸ್ಪಷ್ಟವಾಗಿತ್ತು.
***************************************
ತಾನು ದುಡಿದ ದುಡ್ಡನ್ನೆಲ್ಲ ಸಾರಾಯಿ ಅಂಗಡಿಗೆ ಹಾಕಿ ಕುಡಿದು ಬರುತ್ತಿದ್ದ ಮೂಕಾಂಬಿಕೆಯ ತಂದೆ ಬೀರಣ್ಣ.ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ,ಹೆಣ್ಣು ಹೆತ್ತಿದ್ದಕ್ಕಾಗಿ ಹೊಡೆಯುತ್ತಿದ್ದ.ಆಕೆಯ ತಾಯಿ ದ್ಯಾಮವ್ವ ಪೆಟ್ಟನ್ನು ಸಹಿಸಿಕ್ಕೊಳ್ಳುವಷ್ಟು ಸಹಿಸಿಕೊಂಡು ಆಮೇಲೆ ಮೂಲೆಯಲ್ಲಿದ್ದ ಪೊರಕೆಯನ್ನು ತೆಗೆದುಕೊಂಡು ಬಾಸುಂಡೆ ಬರುವಂತೆ ಗಂಡನಿಗೆ ಬಾರಿಸುತ್ತಿದ್ದಳು."ನಾನೇನು ಸತಿ ಸಾವಿತ್ರಿ ಅಲ್ಲ ತಿಳ್ಕ....ನಂಗೆ ಹೊಡಿತೀಯ ಬೇವರ್ಸಿ...." ಎಂದು ಸಿಕ್ಕಸಿಕ್ಕದ್ದರಲ್ಲಿ ಆತನ ಕುಡಿದ ನಶೆ ಇಳಿಯುವಂತೆ ಹೊಡೆಯುತ್ತಿದ್ದಳು.ಓದು-ಬರಹ ಬಾರದ ತಂದೆ-ತಾಯಿಯರಿಗೆ ಇದ್ದ ಒಬ್ಬ ಮಗಳನ್ನು ಓದಿಸುವ ಮನಸ್ಸು ಇಲ್ಲ.ಬೇರೆಯವರ ಮನೆಯ ಮುಸುರೆ ತಿಕ್ಕುವ ಹುಡುಗಿಯನ್ನು ಶಾಲೆಗೆ ಕಳುಹಿಸುವುದು ಹಾದರ ಮಾಡಿದಂತೆ ಎಂದು ನಂಬುತ್ತಿದ್ದವರು ದ್ಯಾಮವ್ವ ಹಾಗೂ ಬೀರಣ್ಣ.
ಅದೊಂದು ದಿನ ಕೂಲಿ ಕೆಲಸದಿಂದ ಬಂದ ತಾಯಿ-ಮಗಳು ನೋಡಿದಾಗ,ಬೀರಣ್ಣ ರಕ್ತ ಕಾರಿಕೊಂಡು ಸತ್ತು ಬಿದ್ದಿದ್ದ.ಅದೆಲ್ಲಿಯ ಕಳ್ಳಭಟ್ಟಿಯನ್ನು ಕುಡಿದು ಬಿದ್ದಿದ್ದನೋ ಗೊತ್ತಿಲ್ಲ.ಇದ್ದೊಂದು ಪೀಡೆ ತೊಲಗಿತು ಎಂಬ ಭಾವ ದ್ಯಾಮವ್ವನಿಗೆ.ಅಪ್ಪನನ್ನು ಅಷ್ಟಾಗಿ ಹಚ್ಚಿಕ್ಕೊಳ್ಳದ ಮೂಕಾಂಬೆಗೂ ಏನೂ ಅನಿಸಲಿಲ್ಲ.ಕಾಲಕ್ರಮೇಣ ದ್ಯಾಮವ್ವ ಆ ಊರ ಜಮೀನ್ದಾರನಿಗೆ ಸುಖ ಕೊಡುವ ಸರಕಾದಳು.ಆತ ಕೊಡುತ್ತಿದ್ದ ಅಷ್ಟಿಷ್ಟು ಕಾಸಿನಲ್ಲಿ ತಾಯಿ ಮಗಳು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು.ಆದರೆ ಜಮೀನ್ದಾರ ಒಂದು ದಿನ ಮೂಕಾಂಬೆಯ ಮೇಲೂ ಕಣ್ಣು ಹಾಕಿದ್ದ.ಈ ವಿಷಯ ದ್ಯಾಮವ್ವನಿಗೆ ತಿಳಿದಿದ್ದರು ಆಕೆಯದು ಜಾಣ ಕುರುಡುತನ.ತನ್ನ ತಾಯಿಯ ಹಾದಿ ಹಿಡಿಯಲು ಬಯಸದ ಮೂಕಾಂಬೆ,ರಾತ್ರೋರಾತ್ರಿ ಊರು ಬಿಟ್ಟು ಬಂದಿದ್ದಳು.ಹಾಗೆ ಊರು ಬಿಟ್ಟು ಬಂದ ಮೂಕಾಂಬೆಗೆ ಸೂರಾಗಿದ್ದು 'ಆಲಯ'.
  *******************************************
'ಮೂಕವ್ವ.....",ಎಂದು ಬಾಣಂತನದ ಆರೈಕೆಯಲ್ಲಿದ್ದ ಹುಡುಗಿಯೊಬ್ಬಳು ಕರೆದಾಗ,ಪಕ್ಕದ ಕೋಣೆಯಿಂದ ಮೂಕಾಂಬೆ ಓಡಿ ಬಂದಳು.ಸುಮಾರು ಎಂಟು ಮಕ್ಕಳನ್ನು ಹೆತ್ತ ಮೂಕಾಂಬಿಕೆ ಈಗ ಬಾಡಿಗೆ ತಾಯಿಯ ಹುದ್ದೆಯಿಂದ ನಿವೃತ್ತಿ ಪಡೆದ್ದಿದ್ದಾಳೆ.ನಿವೃತ್ತಿ ಪಡಿದ್ದಿದ್ದಾಳೆ ಅನ್ನುವುದಕ್ಕಿಂತ,ಆಕೆಯನ್ನು ಆ ಹುದ್ದೆಯಿಂದ ಮೊಟಕುಗೊಳಿಸಿದ್ದಾರೆ.ಇದೀಗ ಆಕೆ ಬಾಡಿಗೆ ತಾಯಂದಿರನ್ನು ನೋಡಿಕೊಳ್ಳುವ ಹಿರಿಯ ಸೇವಕಿ.ವಯಸ್ಸು ನಲವತ್ತೈದರ ಸಮೀಪವಿರಬಹುದು.ಆದರೂ ಆಕೆಯ ಮುಖ ನೋಡಿದರೆ ವಯಸ್ಸಿಗಿಂತ ಹತ್ತು ವರ್ಷ ದೊಡ್ಡವಳಂತೆ ಕಾಣುತ್ತಿದ್ದಳು.ಎರಡು ಬಾಡಿಗೆ ತಾಯಂದಿರ ಜವಬ್ದಾರಿ ಹೊತ್ತ ಮೂಕವ್ವನಿಗೆ 'ಆಲಯ'ದಲ್ಲಿ ಜಾಗವಿಲ್ಲ.ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಕೆಲಸ.ಆ ನಂತರ ಒಂದೆರಡು ಮೈಲಿ ನೆಡೆದು ಹೋಗಿ ತನ್ನ ಬಾಡಿಗೆ ಕೋಣೆ ಸೇರುತ್ತಿದ್ದಳು.ವಾರದಲ್ಲಿ ಒಂದು ದಿನ ರಜೆ.
ಮೂಕಾಂಬಿಕೆಗೆ ಇತ್ತೀಚೆಗೆ ಮನಸ್ಸಿನಲ್ಲಿ ಅದೇನೋ ತಲ್ಲಣ.ಒಂದು ರೀತಿಯ ವ್ಯಾಕುಲತೆ ಆಕೆಯ ಮನಸ್ಸನ್ನು ಆವರಿಸಿತ್ತು.ಆಕೆಯ ಬದುಕಿನಲ್ಲಿ ಎಲ್ಲೂ ಆಕೆಯ ಭಾವನೆಗಳಿಗೆ ಬೆಲೆ ಇರಲಿಲ್ಲ,ಆಸೆಗಳಿಗೆ ಪುರಸ್ಕಾರವಿರಲಿಲ್ಲ.ಸುಪ್ತ ಮನಸ್ಸಿನಲ್ಲಿ ಅಡಗಿದ್ದ ನಿರ್ದಯಿ ಭಾವಗಳು ಇದೀಗ ಪ್ರಕಟಗೊಂಡು ಅವಳನ್ನು ಹಿಂಡುತ್ತಿದ್ದವು.ಆಕೆಗೆ ಆಕೆಯ ಬದುಕಿನ ರೀತಿಯ ಬಗೆಗೆ ಸಂಶಯ.ತಾಯ್ತನವನ್ನು ಪೂರ್ಣವಾಗಿ ಅನುಭವಿಸಬೇಕೆನ್ನುವ ಹಂಬಲ ಬಹಳವಾಗಿ ಕಾಡುತ್ತಿದೆ.ದಾರಿಯಲ್ಲಿ ಹೋಗುವ ಯುವಕ-ಯುವತಿಯರನ್ನು ನೋಡುತ್ತಾ ತನ್ನ ಹೊಟ್ಟೆಯಲ್ಲಿ ಹುಟ್ಟಿದವುಗಳು ಇಷ್ಟೇ ದೊಡ್ಡವರಾಗಿರಬಹುದು ಎಂದೆನಿಸುತ್ತಿತ್ತು.ತಾನು ಎಂಟು ಮಕ್ಕಳನ್ನು ಹೆತ್ತರೂ ಆ ಮಕ್ಕಳ ಬಾಲ್ಯವನ್ನು ತಾನು ಕಾಣಲಿಲ್ಲವಲ್ಲ ಎಂಬ ಯಾತನೆ.ಅದೇಕೆ ತನಗೆ ಈ ವಯಸ್ಸಿನಲ್ಲಿ ಈ ರೀತಿಯ ಚಿಂತೆಗಳು ಕಾಡುತ್ತಿವೆ ಎಂಬುದು ಸ್ವತಃ ಆಕೆಗೆ ತಿಳಿದಿಲ್ಲ.ಒಂದೊಮ್ಮೆಯಂತೂ ತಾನು ವ್ಯಭಿಚಾರ ಮಾಡಿಬಿಟ್ಟೆನೇನೋ ಎಂದೆನಿಸಿ "ಥೂ...." ಎಂದು ತನ್ನ ಬಗ್ಗೆ ತಾನೇ ಅಸಹ್ಯ ಪಡುತ್ತಿದ್ದಳು.ತನಗೂ ಒಂದು ಒಳ್ಳೆಯ ಕುಟುಂಬವಿದ್ದರೆ ಬಹುಶಃ ತಾನು ನಾಲ್ಕರು ಮಕ್ಕಳನ್ನು ಹೆತ್ತು ಮರ್ಯಾದೆಯ ಜೀವನ ಬದುಕಬಹುದಿತ್ತು.ಈ ರೀತಿಯ ಗರ್ಭವನ್ನು ಮಾರಿ ಬದುಕಿದ್ದು ಹೇಸಿಗೆ ಎನಿಸುತ್ತಿತ್ತು.ಆದರೆ ಮರುಕ್ಷಣದಲ್ಲಿಯೇ ತನ್ನ ಹೊಟ್ಟೆಯನ್ನು ಮುಟ್ಟಿಕೊಂಡು,ತಾನೊಬ್ಬ ಪವಿತ್ರವಾದ ತಾಯಿ ಎಂದೆನಿಸಿ ಮನಸ್ಸು ಸಂತೋಷಿಸುತ್ತಿತ್ತು.ಮುದ್ದು ಮುಖದ ಎಳೆಯ ಕಂದಮ್ಮಗಳು ಈಕೆಯ ಮೊಲೆಯ ಹಾಲನ್ನು ತೃಪ್ತಿಯಾಗುವಷ್ಟು ಉಂಡು ಕಣ್ಣು ಮುಚ್ಚಿ ಸುಖ ನಿದ್ರೆ ಮಾಡುತ್ತಿದ್ದ ಆ ನೆನಪುಗಳು ಜಾಗೃತವಾದಾಗ ಮೂಕಾಂಬೆಯ ಮನಸ್ಸು ಪ್ರಪುಲ್ಲವಾಗುತ್ತಿತ್ತು.ತಾನೊಂದು ಆನಾಥಶ್ರಮವನ್ನು ಸೇರಿ,ಅಲ್ಲಿರುವ ಎಳೆಯ ಕಂದಮ್ಮಗಳ ಬಾಲ್ಯವನ್ನು ಕಂಡು ಸಂಪೂರ್ಣ ಮಾತೃತ್ವವನ್ನು ಪಡೆಯುವ ಅದಾಗಲೇ ಚಿಗುರೊಡೆದ ಆಲೋಚನೆ ಇದೀಗ ಹೆಮ್ಮರವಾಗಿತ್ತು.ತಡ ಮಾಡದೇ 'ಆಲಯ'ಕ್ಕೆ ತಾನು ಬರುವುದಿಲ್ಲವೆಂಬ ತನ್ನ ನಿರ್ಧಾರವನ್ನು ಹೇಳಿದ್ದಳು.
ಸಂಜೆ ಆರರ ಸುಮಾರಿಗೆ,'ಆಲಯ' ದಲ್ಲಿಯ ತನ್ನ ಕಡೆಯ ದಿನವನ್ನು ಮುಗಿಸಿ ತನ್ನ ಪುಟ್ಟ ಮನೆಯತ್ತ ಹೆಜ್ಜೆ ಹಾಕಿದಳು.ಮನಸ್ಸು ತಿಳಿಯಾಗಿತ್ತು.ಮನೆಗೆ ಬಂದವಳೇ ಎಂದಿನಂತೆ ಕೈಕಾಲು ಮುಖ ತೊಳೆದು ದೇವರಿಗೆ ದೀಪ ಹಚ್ಚಿದಳು.ದೇವಿಯ ಮುಖವನ್ನೊಮ್ಮೆ ನೋಡಿದಾಗ ಆ ಪೋಟೋದಲ್ಲಿದ್ದ ಗಾಜಿನಲ್ಲಿ ತನ್ನದೇ ಮುಖ ಕಂಡಾಗ ಮೂಕಾಂಬಿಕೆ ಬೆಚ್ಚಿಬಿದ್ದಳು.ಮರುಕ್ಷಣದಲ್ಲಿಯೇ ತಾನೇ ಜಗವನ್ನು ಸಲಹುವ ಜಗನ್ಮಾತೆಯ ಸ್ವರೂಪ.ಮಾತೃತ್ವದ ಸ್ವರೂಪ.ತನ್ನದಲ್ಲದ ಮಗುವನ್ನು ತನ್ನ ಗರ್ಭದಲ್ಲಿ ರಕ್ಷಿಸಿದ್ದ ತಾನೊಂದು ಶಕ್ತಿ ಸ್ವರೂಪ ಎಂದೆನಿಸಿತು ಆಕೆಗೆ.ಮನದೊಳಗೆ ಹುದುಗಿದ್ದ ಭಾವಗಳು ಇದೀಗ ಸ್ಪಷ್ಟವಾಗಿತ್ತು.ತನ್ನ ಆನಾಥ ಮಕ್ಕಳ ಪಾಲನೆಯ ನಿರ್ಧಾರ ಆಕೆಗೆ ಹೆಮ್ಮೆ ಎಂದೆನಿಸಿತು.ಮರುದಿನವೇ ಯಾವುದಾದರೂ ಆನಾಥಾಶ್ರಮವನ್ನು ಸೇರಿ ತಾಯಿಯ ಪ್ರೀತಿ ಕಾಣದ ಮುದ್ದು ಮಕ್ಕಳಿಗೆ ತಾಯಿಯಾಗಬೇಕು.ಆಕೆಯ ಮನಸ್ಸಿನಲ್ಲಿ ಎದ್ದಿದ್ದ ಬಿರುಗಾಳಿ,ತಂಗಾಳಿಯಾಗಿ ಪರಿವರ್ತನೆಯಾಗಿದೆ. "ದ್ಯಾವಿ...." ಎಂದು ತನ್ನ ಹೊಟ್ಟೆಯನ್ನೊಮ್ಮೆ ಹಿಡಿದುಕೊಂಡಳು.ವಿಪರೀತ ನೋವು.ಸುಮಾರು ದಿನಗಳಿಂದ ಇಂತಹ ನೋವು ಆಕೆಯನ್ನು ಪದೇ ಪದೇ ಬಾಧಿಸುತ್ತಿತ್ತು.ಆದರೂ ಆಕೆ ಅದರೆಡಗೆ ಗಮನ ಕೊಡದೇ ಅದು ಯವುದೋ ನೋವುನಿವಾರಕ ಗುಳಿಗೆ ನುಂಗುತ್ತಿದ್ದಳು.ಆದರೆ ಈ ಬಾರಿ ವಿಪರೀತ ನೋವು.ತಾನು ಹೆತ್ತ ಎಂಟು ಮಕ್ಕಳಲ್ಲಿ ಯಾವ ಮಕ್ಕಳೂ ಹೊರಗೆ ಬರುವಾಗ ಇಂತಹ ನೋವುಂಡ ನೆನಪಿಲ್ಲ ಅಥವಾ ಅದನೊಂದು ಸುಖ ಎಂದುಕೊಂಡ ಆಕೆಗೆ ಆ ನೋವು ನಾಟಿರಲಿಲ್ಲ.ಆದರೆ ಇದು ಅಸಾಧ್ಯವಾದ ನೋವು."ಅಯ್ಯೋ........" ಎಂದು ಚೀರಿಕೊಂಡು ನೆಲದ ಮೇಲೆ ಕುಸಿದಳು.
ದೇವರ ಮುಂದೆ ಹಚ್ಚಿದ ದೀಪ ನಂದಿ ಹೋಯಿತು.ತಾನೊಂದು ಪರಿಪೂರ್ಣ ತಾಯಾಗಬೇಕು ಎಂದಿದ್ದ ಮೂಕಾಂಬಿಕೆಯ ಆಸೆ ಮೂಕಾವಾಗಿಯೆ ಆಕೆಯೊಡನೆ ಸಮಾಧಿಯಾಗಿತ್ತು

Tuesday 6 June 2017

ಮಿಡಿ ಉಪ್ಪಿನಕಾಯಿ ಪುರಾಣ

ಮಿಡಿ ಉಪ್ಪಿನಕಾಯಿ ಪುರಾಣ
ಊಟದ ಜೊತೆಗೆ ಉಪ್ಪಿನಕಾಯಿ ಇರಬೇಕು ಎಂಬ ನಿಯಮವೇನೂ ಇಲ್ಲದ್ದಿದ್ದರೂ,ಉಪ್ಪಿನಕಾಯಿ ಇದ್ದರಂತೂ ಊಟದ ಮಜವೇ ಬೇರೆ.ಅದರಲ್ಲೂ ತನ್ನ ಪರಿಮಳದಿಂದಲೇ ಹೆಸರುವಾಸಿಯಾಗಿರುವ ಅಪ್ಪೆ ಮಿಡಿಯ ಉಪ್ಪಿನಕಾಯಿ ಇದ್ದರಂತೂ ಊಟದ ಗಮ್ಮತ್ತೇ ಬೇರೆ.ಆ ಪರಿಮಳಕ್ಕೆ ಒಂದೆರಡು ತುತ್ತು ಅನ್ನ ಜಾಸ್ತಿಯೇ ಸೇರುತ್ತದೆ.ಮಲೆನಾಡಿನ ನಿತ್ಯಹರಿದ್ವರ್ಣದ ಕಾಡುಗಳಲ್ಲಿಯೇ ಹೆಚ್ಚಾಗಿ ಬೆಳೆಯುವ ಈ ಅಪ್ಪೆ ಮಿಡಿಯ ಸೊಗಸನ್ನು,ಸೊಬಗನ್ನು ಬಲ್ಲವನೇ ಬಲ್ಲ.ಅಪ್ಪೇ ಮಿಡಿಯಲ್ಲಿ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದಾದರೂ ಈ ಮಿಡಿಯ ಉಪ್ಪಿನಕಾಯಿಗೆ ಹೆಚ್ಚು ಪ್ರಾಶಸ್ತ್ಯ.
ಬಾಲ್ಯದ ಬೇಸಿಗೆಯಲ್ಲಿ ಅಜ್ಜಿಯ ಮನೆಗೆ ಹೋದಾಗ ಬೇಲಿಯ ಬದಿಯ ಕಾಟು ಮಾವಿನ ಎಳೆಯ ಕಾಯಿಗಳನ್ನು ಹೆಕ್ಕಿ ಅದನ್ನು ಅಪ್ಪೆ ಮಿಡಿಯೆಂದು ಭಾವಿಸಿ ಮನೆಗೆ ತಂದಾಗ,ಅದು ಯಾವುದೋ ಕಾಟು ಮಿಡಿ ಎಂದು ಅಮ್ಮ ಹಾಗೂ ಅಜ್ಜಿ ಇಬ್ಬರೂ ಅದನ್ನು ತೆಂಗಿನ ಕಟ್ಟೆಗೆ ಬಿಸಾಡುತ್ತಿದ್ದುದ್ದನ್ನು ನೆನಪಿಸಿಕೊಂಡರೆ,ಈಗ ನಗು ಬರುತ್ತದೆ.ಅಷ್ಟೇ ಅಲ್ಲದೆ ಬೇಲಿಗಳಲ್ಲಿ ಸಂಚರಿಸಿದ್ದಕ್ಕಾಗಿ ಮಂಗಳಾರತಿಯು ಆಗುತ್ತಿತ್ತು.ಜೊತೆಗೆ ಬೇಲಿ ಬದಿಯಲ್ಲಿ ಹಾವುಗಳು ಇರುತ್ತದೆ,ಸತ್ತವರು ಪ್ರೇತಗಳಾಗಿ ಓಡಾಡುತಿರುತ್ತಾರೆ ಎಂದೆಲ್ಲ ಹೆದರಿಸುವ ಪ್ರಯತ್ನಗಳು ನೆಡೆಯುತ್ತಿದ್ದವು.ಇಷ್ಟೆಲ್ಲಾ ಮಾತುಗಳನ್ನು ಕೇಳಬೇಕಾದದ್ದು ಅಪ್ಪೇ ಮಿಡಿಯ ಬಗೆಗೆ ನಮಗಿದ್ದ ಆಸೆಯಿಂದಲೇ ಆಗಿತ್ತು.
ಅಪ್ಪೆ ಮಿಡಿಯ ಉಪ್ಪಿನಕಾಯಿಯನ್ನು ಮಾಡುವುದು ಸಂರಕ್ಷಿಸುವುದು ಎರಡೂ ಕೂಡ ಬಾಣಂತಿಯರನ್ನು ನೋಡಿಕೊಂಡಂತೆ.ಸಾಕಷ್ಟು ನಿಯಮಗಳನ್ನು ಹೊಂದಿದ ಒಂದು ಕಠಿಣ ವ್ರತದಂತೆ ಮಿಡಿ ಉಪ್ಪಿನಕಾಯಿಯ ತಯಾರಿ ನೆಡೆಯುತ್ತಿತ್ತು.ಬಂದ ರಾಶಿ ಮಿಡಿಗಳಲ್ಲಿಯ ಎಲೆಗಳನ್ನು ತೆಗೆಯುವುದು ಮಾತ್ರ ನಮ್ಮ ಕೆಲಸ.ಕೆಲವೊಮ್ಮೆ ಹಾಳಾದ ಮಿಡಿಗಳನ್ನು ಬೇರ್ಪಡಿಸುವುದನ್ನೂ ಮಾಡುತ್ತಿದ್ದೆವು.ಆಗ ಮಾತ್ರ ನನ್ನ ಅಜ್ಜಿಯನ್ನು ಸಾವಿರ ಪ್ರಶ್ನೆ ಕೇಳುತ್ತಿದ್ದೆವು."ಇದು ಸರಿವುಂಟಾ...?" ಎಂದು ಹತ್ತು ಮಿಡಿಗಳಿಗೆ ಒಮ್ಮೆಯಾದರೂ ಕೇಳುತ್ತಿದ್ದೆವು.ಇದಾದ ಮೇಲೆ ಅದನ್ನು ಒಂದಷ್ಟು ದಿನ ಉಪ್ಪಿನಲ್ಲಿ ಒತ್ತಿ ಇಟ್ಟು,ತದನಂತರ ಅದಕ್ಕೆ ಬೇಕಾದ ಮಸಾಲೆಯನ್ನು ರುಬ್ಬಿ,ನೀರು ತಾಗದಂತೆ ಕಾಪಾಡಿಕೊಂಡ ಮಿಡಿಗಳಿಗೆ ಅವುಗಳನ್ನು ಬೆರೆಸಿ ಉಪ್ಪಿನಕಾಯಿ ತಯಾರಿಸಲಾಗುತ್ತಿತ್ತು.ಹಾಗೆ ತಯಾರಿಸಿದ ಉಪ್ಪಿನಕಾಯಿ ಮರುವರ್ಷದಿಂದ ಬಳಕೆಗೆ ಜಾರಿಯಾಗುತ್ತಿತ್ತು.ಹೀಗೆ ಮಾಡಿಟ್ಟ ಉಪ್ಪಿನಕಾಯಿಯನ್ನು ದೊಡ್ಡ ಪಿಂಗಾಣಿ ಭರಣಿಗಳಲ್ಲಿ ಗಾಳಿ-ನೀರು ತಾಗದಂತೆ ಇಡಲಾಗುತ್ತಿತ್ತು.ಹೀಗೆ ಒಂದಕ್ಕಿಂತ ಹೆಚ್ಚು ವರ್ಷ ಕತ್ತಲ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸಿದ ಉಪ್ಪಿನಕಾಯಿ ಮಾತ್ರ ಬಳಕೆಗೆ ಯೋಗ್ಯ.
ಕೆಲವೊಮ್ಮೆ ನೀರಿನ ಕೈಯಲ್ಲಿ ಮುಟ್ಟಿದರೆ ಉಪ್ಪಿನಕಾಯಿಯಲ್ಲಿ ಹುಳ ಬರುವುದೂ ಉಂಟು.ಹೀಗೆ ಒಂದೊಮ್ಮೆ ನಮ್ಮ ನೆರೆಮನೆಯ ಚಿಕ್ಕ ಹುಡುಗ ಆಟದಿಂದ ಬಂದವನೇ ಕೈ ಸರಿಯಾಗಿ ಒರೆಸಿಕ್ಕೊಳ್ಳದೇ ಮಿಡಿ ತಿನ್ನುವ ತೊಡುವಿನಲ್ಲಿ,ಜಾಡಿಗೆ ಕೈ ಹಾಕಿದ್ದಾನೆ.ಪರಿಣಾಮ ಒಂದು ತಿಂಗಳಲ್ಲೇ ಜಾಡಿಯೊಳಗೆ ಹುಳ.ಪಾಪ ಹುಡುಗನ ತಾಯಿ ಉಪ್ಪಿನಕಾಯಿ ಹಾಳಾಯಿತೆಂದು ರೋದಿಸಿದ್ದು ಅಷ್ಟಿಷ್ಟಲ್ಲ.ಮಗನಿಗೆ ಸರಿಯಾಗಿ ಬೈದು ಹೊಡೆದು ಮಾಡಿದರೂ ಹಾಳಾಗಿದ್ದ ಉಪ್ಪಿನಕಾಯಿ ವಾಪಸ್ಸು ಬರುವುದೇ??ಕಡೆಗೆ ಅದನ್ನು ನೀರಿನಲ್ಲಿ ಸುರಿದು ಮಿಡಿಗಳನ್ನು ಬೇರ್ಪಡಿಸುವ ಪ್ರಯತ್ನವಾದರೂ ಅದು ಅಷ್ಟು ಯಶಸ್ವಿಯಾಗದೇ,ಅದನ್ನು ತೆಂಗಿನ ಮರದ ಬುಡಕ್ಕೆ ಹಾಕುವಾಗ ಆಕೆಗೆ ಹೇಳತೀರದ ಸಂಕಟ.ಉಪ್ಪಿನಕಾಯಿ ತೆಗೆಯಲು ಬಳಸುವ ಸೌಟನ್ನು ಸಹ ನೀರ ಪಸೆ ಆರಬೇಕೆಂದು ಬಿಸಿ ಮಾಡಲಾಗುತ್ತದೆ.ಹಾಗಾಗಿಯೇ ಉಪ್ಪಿನಕಾಯಿಗೆ ಬಾಣಂತಿಯಷ್ಟೇ ಆರೈಕೆ.ಈಗಲೂ ಜ್ವರ ಬಂದಾಗ ಗಂಜಿಯೊಡನೆ,ಅಜ್ಜಿ ಮಾಡಿದ ಅಪ್ಪೆ ಮಿಡಿ ಉಪ್ಪಿನಕಾಯಿ ಇದ್ದರೆ ನಾಲಗೆ ಕಹಿಯಲ್ಲಿಯೂ ಊಟ ಸೇರುತ್ತದೆ.ಈಗಲೂ ಅಪ್ಪೆ ಮಿಡಿಯ ಹೆಸರು ಕಿವಿಗೆ ಬಿದ್ದಾಗಲೆಲ್ಲಾ, ಮನಸ್ಸು ಬಾಲ್ಯದ ಬೇಸಿಗೆಯ ದಿನಗಳನ್ನು ನೆನೆದು ಪ್ರಪುಲ್ಲವಾಗುವುದು.

Sunday 8 January 2017

ಸೋಗು

ಸೋಗು
ಭಾನುವಾರದ ಮುಂಜಾನೆಯಲ್ಲಿ ಮನೆಯ ಮುಂದಿದ್ದ ಉದ್ಯಾನದಲ್ಲಿ,ಉಯ್ಯಾಲೆಯಲ್ಲಿ ತೂಗುತ್ತಾ,ಕಾಫಿ ಹೀರುತ್ತಾ ಕುಳಿತಿದ್ದ ಭಾಸ್ಕರ,ಅದಾಗ ತಾನೇ ಮಾಲಿ ತಂದುಕೊಟ್ಟಿದ್ದ ಇಂಗ್ಲೀಷ್ ಪೇಪರ್‍ನ ಮೇಲೆ ಕಣ್ಣಾಡಿಸುತ್ತಿದ್ದ.ದಿನಕ್ಕೆ ಸರಿಸುಮಾರು ಹದಿನಾಲ್ಕು ಗಂಟೆ ದುಡಿಯುವ ಭಾಸ್ಕರನಿಗೆ ಭಾನುವಾರ ಮಾತ್ರವೇ ಬಿಡುವಿನ ದಿನ.ಅದಾಗಲೇ ಆತ ಪ್ರಾರಂಭಿಸಿದ್ದ ಒಂದು ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯೊಂದು ಭಾರಿ ಮೊತ್ತಕ್ಕೆ ಖರೀದಿಸಿತ್ತು.ವಾರದ ಎಲ್ಲಾ ದಣಿವನ್ನು ಆರಿಸುವ ರೀತಿಯಲ್ಲಿ ಆ ಉದ್ಯಾನದಲ್ಲಿ ಗಾಳಿ ಬೀಸುತ್ತಿತ್ತು.ಚಿಲಿಪಿಲಿ ಎನ್ನುತ್ತಿದ್ದ ಹಕ್ಕಿಗಳ ಸದ್ದು ಮನಸ್ಸಿನ ಸಂಭ್ರಮಕ್ಕೆ ಇನ್ನಷ್ಟು ಇಂಬು ನೀಡುತ್ತಿತ್ತು.
"ಭಾಸ್ಕರ...." ಮೃದುವಾದ ಪ್ರೀತಿಯ ದನಿಯೊಂದು ಭಾಸ್ಕರನನ್ನು ತಾನಿದ್ದ ಪ್ರಪಂಚದಿಂದ ಎಚ್ಚರಿಸಿತು.
"ಓ...ಅಪ್ಪಾ...ಬನ್ನಿ ಕೂತುಕೊಳ್ಳಿ..." ಎಂದು ತಾನು ಕುಳಿತಿದ್ದ ಉಯ್ಯಾಲೆಯಲ್ಲಿಯೇ ಅಪ್ಪನಿಗೊಂದು ಜಾಗ ಮಾಡಿಕೊಟ್ಟ ಭಾಸ್ಕರ.ರಾಯರು ಮಗನ ಪಕ್ಕದಲ್ಲಿಯೇ ಕುಳಿತರು."ಕಾಫಿ ಕುಡಿದ್ರಾ ಅಪ್ಪಾ...." ಎಂದು ಭಾಸ್ಕರ ಅಪ್ಪನನ್ನು ವಿಚಾರಿಸಿದನು.ರಾಯರು "ಆಗಲೇ ಆಯ್ತು...ನಿಂಗೆ ಈಗ ಬೆಳಗಾಗಿದೆ...ನನಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ಎಚ್ಚರವಾಗುತ್ತೆ.." ಎಂದು ತಮ್ಮ ಮುಪ್ಪಿನ ಸಮಸ್ಯೆಯನ್ನು ಹೇಳಿ ನಕ್ಕರು ರಾಯರು."ಇನ್ನು ನಿದ್ದೆ ಸಮಸ್ಯೆ ಸರಿ ಆಗಿಲ್ವಾ...?ತಡಿ ಈಗಲೇ ಡಾಕ್ಟರ್‍ಗೆ ಪೋನ್ ಮಾಡ್ತೀನಿ" ಎನ್ನುತ್ತಾ ತನ್ನ ಪೋನ್ ತೆಗೆದನು ಭಾಸ್ಕರ."ಬೇಡ ಪುಟ್ಟಾ....ನಂಗೇನು ನಲವತ್ತು-ಐವತ್ತು ವರ್ಷವೇ ಡಾಕ್ಟರ್ ಹತ್ರ ಹೋಗಕ್ಕೆ?ನಂಗೂ ವಯಸ್ಸಾಯ್ತು...ಎಪ್ಪತ್ತು ದಾಟಿದೆ....ಬದುಕಿನ ಎಲ್ಲಾ ಆಸೆಗಳನ್ನು ಮಗನಾಗಿ ನೀನು ಪೂರೈಸಿದ್ದಿ.ಇನ್ನು ಬದುಕುವ ಆಸೆ ಇಲ್ಲಾ ನಂಗೆ...." ಎನ್ನುತ್ತಿದ್ದಂತೆ "ಯಾಕಪ್ಪಾ ಹಾಗೆಲ್ಲಾ ಮಾತಾಡ್ತೀಯಾ..??ನೀನು ಇನ್ನು ಒಂದಷ್ಟು ಕಾಲ ನನ್ನ ಜೊತೆಗೆ ಇರಬೇಕು..." ಎಂದಾಗ ಮಗನ ಪ್ರೀತಿಗೆ ಕಟ್ಟುಬಿದ್ದು ರಾಯರು ಮಾತು ಮುಂದುವರಿಸಲಿಲ್ಲ.
"ಮತ್ತೆ ಏನಪ್ಪಾ ಸಮಾಚಾರ??" ಭಾಸ್ಕರ ಅಪ್ಪನನ್ನು ಪ್ರಶ್ನಿಸಿದ.ಒಂದೇ ಮನೆಯಲ್ಲಿ ಇದ್ದರೂ,ಅಪ್ಪ ಮಗ ಜೊತೆಗೆ ಕುಳಿತು ಮಾತನಾಡಲು ವಾರದ ಆರು ದಿನಗಳು ಕಷ್ಟ.ಆದರೆ ಭಾನುವಾರ ಮಾತ್ರ ತಂದೆ-ಮಗ ಒಂದಿಷ್ಟು ಹರಟುತ್ತಿದ್ದರು.ಇದನ್ನು ಕಂಡು ರಾಯರ ಹೆಂಡತಿ ಸೊಸೆಯನ್ನು ಕುರಿತು "ಶುರುವಾಯ್ತು ನಿನ್ನ ಗಂಡಂದು,ನನ್ನ ಗಂಡಂದು ಮೀಟಿಂಗ್..." ಎಂದು ನಗುತ್ತಿದ್ದರು.
ತಾನು ತಂದಿದ್ದ ದಿನಪತ್ರಿಕೆಯ ಒಳಗಿನಿಂದ ಅಹ್ವಾನ ಪತ್ರಿಕೆಯೊಂದನ್ನು ತಗೆದು ರಾಯರು ತಮ್ಮ ಮುದ್ದಿನ ಮಗನ ಮುಂದಿಟ್ಟರು.ತುಂಬಾ ಐಷಾರಾಮಿ ಎಂಬಂತೆ ಇದ್ದ ಆ ವಿವಾಹಪತ್ರಿಕೆಯ ವಿನ್ಯಾಸ ಆಕರ್ಷಕವಾಗಿತ್ತು."ಭಾಸ್ಕರ....",ರಾಯರು ಮಾತು ಪ್ರಾರಂಭಿಸುತ್ತಿದ್ದಂತೆ,ತನ್ನ ಕಾಪಿ ಕಪ್‍ಅನ್ನು ಟೇಬಲ್ ಮೇಲೆ ಇಡುತ್ತಿದ್ದ ಭಾಸ್ಕರನ ಕಣ್ಣು ರಾಯರು ಇಟ್ಟಿದ್ದ ಆ ಪತ್ರಿಕೆಯ ಮೇಲೆ ಬಿದ್ದಿತು.ವಿಖ್ಯಾತ ವ್ಯಕ್ತಿಯಾಗಿದ್ದ ಆತನಿಗೆ ದಿನಕ್ಕೆ ಏನಿಲ್ಲವೆಂದರೂ ಮೂರರಿಂದ ನಾಲ್ಕು ಪತ್ರಿಕೆಗಳಂತೂ ಬಂದೇ ಬರುತಿತ್ತು.ಆದರೆ ಆತ ಕೆಲವನ್ನು ಮಾತ್ರ ನೋಡುತ್ತಿದ್ದ.ಕಣ್ಣ ಮುಂದೆ ಸುಂದರವಾಗಿ ಕಾಣುತ್ತಿದ್ದ ಆ ಪತ್ರಿಕೆಯನ್ನು ಕೈಗೆತ್ತಿಕೊಂಡ ಆತನಿಗೆ ವಿಷಯ ತಿಳಿಸಲು ಇದೇ ಸರಿಯಾದ ಸಮಯ ಎಂದುಕೊಂಡ ರಾಯರು "ನಿನ್ನ ಚಿಕ್ಕಪ್ಪನೇ ಬಂದು ಕೊಟ್ಟು ಹೋದ್ರು....ಜೊತೆಗೆ ಸ್ತುತಿ ಕೂಡ ಬಂದಿದ್ದಳು....ಅಷ್ಟೇ ಅಲ್ಲ ನಿನ್ನ ಚಿಕ್ಕಮ್ಮ ಕೂಡ ಬಂದ್ದಿದ್ದರು...ಸುಮನ್ ಕೂಡಾ ಬಂದಿದ್ದ..".ಇಷ್ಟು ಹೊತ್ತು ಆ ಪತ್ರಿಕೆ ನೋಡಲು ಭಾಸ್ಕರನಿಗೆ ಇದ್ದ ಕುತೂಹಲ ಅಪ್ಪನ ಮಾತುಗಳು ಕೇಳಿದ ನಂತರ ಇಲ್ಲವಾಯಿತು.ಅದನ್ನು ಸಂಪೂರ್ಣವಾಗಿ ನೋಡುವ ಮನಸ್ಸಿಲ್ಲದೆ,ಹಾಗೆಯೇ ಇಟ್ಟುಬಿಟ್ಟ.
ಮಗನ ಮನಸ್ಸನ್ನು ಚೆನ್ನಾಗಿಯೇ ತಿಳಿದಿದ್ದ ರಾಯರು ಮಾತು ಮುಂದುವರೆಸಿದರು "ಭಾನುವಾರ ಧಾರೆ...ಒಂದು ವಾರದ ಮುಂಚೆನೇ ಬರೋದಕ್ಕೆ ಹೇಳಿದ..ನಂಗೆ ಒಂದು ಒಳ್ಳೆ ರೇಷ್ಮೆ ಪಂಚೆ-ಷರ್ಟ್,ನಿನ್ನ ಅಮ್ಮನಿಗೆ ಮತ್ತೆ ಲಾವಣ್ಯನಿಗೆ ಸೀರೆ,ಜೊತೆಗೆ ನಿಂಗೆ ಒಂದು ಸೂಟ್ ಕೊಟ್ಟು ಹೋಗಿದ್ದಾರೆ...ಒಂದೆರಡು ದಿನ ಬಿಡುವು ಮಾಡ್ಕೋ..ಎಲ್ಲರೂ ಹೋಗಿ ಬರೋಣ.ಮತ್ತೆ........" ರಾಯರು ಮಾತು ಮುಗಿಸುವ ಮುನ್ನವೇ ಭಾಸ್ಕರ "ನಾನು ಬರಲ್ಲ..." ತನ್ನ ನಿರ್ಧಾರವನ್ನು ಗಟ್ಟಿಯಾಗಿಯೇ ಹೇಳಿದ."ಚಿಕ್ಕಪ್ಪ ಸಂಬಂಧಕ್ಕೆ ಬೆಲೆ ಕೊಡ್ತಾ ಇಲ್ಲ...ಬದಲಿಗೆ ಸವಲತ್ತುಗಳಿಗೆ ಬೆಲೆ ಕೊಡ್ತಾ ಇದ್ದಾರೆ...ನಾನು ಬರಲ್ಲ ಅಷ್ಟೇ...." ಎಂದು ಮತ್ತೊಮ್ಮೆ ತನ್ನ ನಿರ್ಧಾರವನ್ನು ಗಟ್ಟಿಯಾಗಿಯೇ ಹೇಳಿದನು ಭಾಸ್ಕರ.
"ಪುಟ್ಟ..ಹಾಗೆಲ್ಲ ಅನ್ನಬಾರ್ದು....ಇದು ನಿನ್ನ ತಂಗಿಯ ಮದುವೆ....ಜೊತೆಗೆ ನಮ್ಮ ಕುಟುಂಬದ ಕೊನೆಯ ಮದುವೆ....ನೀನು ಅವಳಗೆ ಅಣ್ಣ..ಮದುವೆಯಲ್ಲಿ ಓಡಾಡಬೇಕು...ಅದು ಅಲ್ಲದೇ ಕುಟುಂಬ ಸಮೇತ ಬಂದು ಹೇಳಿ ಹೋಗಿದ್ದಾರೆ...ಹೋಗದೆ ಇದ್ದರೆ ಚೆನ್ನಾಗಿರುತ್ತಾ...?ಅದೂ ಅಲ್ಲದೇ ನಿನ್ನ ಚಿಕ್ಕಪ್ಪ ಈಗ ಮೊದಲಿನ ಹಾಗೇ ಇಲ್ಲ...ಬದಲಾಗಿದ್ದಾನೆ...ನಾನು ಅಂದ್ರೆ ಎಷ್ಟು ಪ್ರೀತಿ ಗೊತ್ತಾ ಅವನಿಗೆ..." ಮತ್ತೊಮ್ಮೆ ರಾಯರು ಮಾತು ಮುಗಿಸುವ ಮುನ್ನ ಭಾಸ್ಕರ "ಸಂಬಂಧಗಳಿಗಲ್ಲ ಬೆಲೆ..ಸವಲತ್ತುಗಳಿಗೆ...ಬಾಂಧವ್ಯಕ್ಕೆ ಅಲ್ಲ ಬೆಲೆ ಬದುಕಿನ ರೀತಿಗೆ...ಹತ್ತು ವರ್ಷಗಳಲ್ಲಿ ಎಷ್ಟು ಬದಲಾವಣೆ ಅಲ್ವ ಅಪ್ಪ...ನಾವು ಅವರ ಬಂಧುಗಳು ಆಗಿದ್ದೇ ಅವಮಾನ ಅಂದುಕೊಂಡವರು,ನಾವು ಅವರ ಮನೆಯ ವಿಶೇಷಗಳಿಗೆ ಬರಬಾರದು ಅಂತ ಅಂದುಕೊಳ್ತಾ ಇದ್ದವರು..ಇವತ್ತು ನಾವು ಬರಲೇಬೇಕು ಅಂತಿದ್ದಾರೆ...ನಿನ್ನ ಹೆಸರು ಹಾಕಿಸಿದ್ದಾರೆ ಪತ್ರಿಕೆಯಲ್ಲಿ..." ಎಂದು ನಗೆಯೊಂದನ್ನು ಬೀರಿದನು ಭಾಸ್ಕರ.
"ನಾನು ಬರಲ್ಲ...ನೀನು,ಅಮ್ಮ ಹೋಗಿ ಬನ್ನಿ...ಬೇಕಿದ್ರೆ ಲಾವಣ್ಯನ್ನು ಕರ್ಕೊಂಡು ಹೋಗಿ...ಬೇರೆ ಯಾರ ಮನೆಯ ವಿಶೇಷಕ್ಕೆ ಆದರೂ ಬರ್ತಿದ್ದೆ...ಆದ್ರೆ ಇದಕ್ಕೆ ಮಾತ್ರ ಒತ್ತಾಯ ಮಾಡಬೇಡಿ..ಪ್ಲೀಸ್.." ಎಂದು ಕೈಮುಗಿದನು ಭಾಸ್ಕರ.ಇನ್ನು ಮಾತನಾಡಿ ಮಗನ ಮನಸ್ಥಿತಿಯನ್ನು ಹಾಳು ಮಾಡುವುದು ಬೇಡ ಎಂದುಕೊಂಡ ರಾಯರು "ಪುಟ್ಟ..ನೀನು ಬರದಿದ್ರೆ ಅವನಿಗೆ ಬೇಜಾರು ಆಗುತ್ತೋ ಇಲ್ಲವೋ...ಆದರೆ ನನಗಂತೂ ಬೇಜಾರಾಗುತ್ತೆ.." ಎಂದು ಮೃದುವಾಗಿಯೇ ತಮ್ಮ ಮನದ ಆಸೆಯನ್ನು ಮಗನ ಮುಂದಿಟ್ಟು ಅಲ್ಲಿಂದ ಹೊರಟರು ರಾಯರು.
ತಾನು ಅರ್ಧ ಮುಗಿಸಿದ್ದ ಓದನ್ನು ಮುಂದುವರೆಸಲು ದಿನಪತ್ರಿಕೆಯನ್ನು ಕೈಗೆತ್ತಿಕೊಂಡನು ಭಾಸ್ಕರ.ಆದರೂ ಅದೇಕೋ ತನ್ನ ಚಿಕ್ಕಪ್ಪನ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಮತ್ತೊಮ್ಮೆ ನೋಡಬೇಕೆನಿಸಿತು.ತೆಗೆದು ನೋಡುತ್ತಿದ್ದಂತೆ "ಶ್ರೀಮತಿ ಮತ್ತು ಶ್ರೀಅನಂತ ರಾವ್ ಮಾಡುವ ವಿಜ್ಞಾಪನೆಗಳು" ಎಂದು ತನ್ನ ತಂದೆಯ ಹೆಸರನ್ನು ಕಂಡನು.ಮತ್ತೆ ಮತ್ತೆ ಅದನ್ನೇ ನೋಡಿದ ಭಾಸ್ಕರನ ಮನಸ್ಸು ಹಳೆಯದನ್ನು ನೆನಪಿಸಿಕೊಳ್ಳುವಂತೆ ಮಾಡಿತು.
    ***************************************************************
ಅದಾಗ ತಾನೇ ಭಾಸ್ಕರ ಪಿಯುಸಿ ಮುಗಿಸಿದ್ದ.ಅನಂತ ರಾಯರಿಗೆ ಹೇಳಿಕ್ಕೊಳ್ಳುವಷ್ಟು ಆದಾಯವಿರಲಿಲ್ಲ.ಕೊಡಿಟ್ಟ ಹಣವೆಲ್ಲ ಮಗಳ ಮದುವೆಗೆ ಖರ್ಚಾಗಿ ಹೋಗಿತ್ತು.ಹಾಗಾಗಿ ಇದ್ದುದ್ದರಲ್ಲಿಯೇ ಜೀವನ ತೂಗಿಸುವುದು ಅನಿವಾರ್ಯವಾಗಿತ್ತು.ಒಂದಿಷ್ಟು ವ್ಯವಹಾರಗಳಿಗೆ ಕೈಹಾಕಿ ಇದ್ದುದನ್ನೆಲ್ಲಾ ಕಳೆದುಕೊಂಡಿದ್ದರು ರಾಯರು.ಇದ್ದ ಒಬ್ಬ ತಮ್ಮನಿಗೆ ಶ್ರೀಮಂತಿಕೆ ಇದ್ದುದ್ದರಿಂದ ಆತನಿಗೆ ಅಣ್ಣನನ್ನು ಕಂಡರೆ ಅಷ್ಟಕಷ್ಟೆ.ರಾಯರು ಆ ಬಗ್ಗೆ ತಲೆ ಕೆಡಿಸಿಕ್ಕೊಳ್ಳುತ್ತಿರಲಿಲ್ಲ.
ಒಂದು ದಿನ ರಾಯರ ಮನೆಗೆ ಆಮಂತ್ರಣ ಪತ್ರಿಕೆಯೊಂದು ಬಂದಿತು.ತನ್ನ ತಮ್ಮನ ಮನೆ ಗೃಹಪ್ರವೇಶದ ಆಹ್ವಾನ ಪತ್ರಿಕೆ ಅದಾಗಿತ್ತು.ಸ್ವಂತ ಅಣ್ಣನನ್ನು ಕರೆಯುವಷ್ಟು ಸೌಜನ್ಯವೂ ಇಲ್ಲದೆ ಬರೀ ಕಾಗದವನ್ನಷ್ಟೇ ಕಳುಹಿಸಿದ್ದ.ಅಲ್ಲದೇ ತಾನು ಮನೆ ಕಟ್ಟಿಸಿರುವ ವಿಷಯವನ್ನೂ ಕೂಡ ತಿಳಿಸಿರಲಿಲ್ಲ.ಆದರೂ ರಾಯರು ತಮ್ಮ ಹೆಂಡತಿಯ ವಿರೋಧದ ನಡುವೆಯೂ ಮಡದಿ-ಮಗನನ್ನು ಕರೆದುಕೊಂಡು ಹೊರಟರು.
ತನ್ನ ಅಂತಸ್ತಿಗೆ ತಕ್ಕವರನ್ನೆಲ್ಲಾ ಕರೆದಿದ್ದ ರಾಯರ ತಮ್ಮನ ಮನೆ ಭವ್ಯ ಬಂಗಲೆಯಂತ್ತಿತ್ತು.ವಿಶಾಲವಾದ ಸೈಟಿನಲ್ಲಿ ಆ ದಿನ ಅದೆಷ್ಟು ಐಷಾರಾಮಿ ಕಾರುಗಳು ನಿಂತಿದ್ದವೋ ಗೊತ್ತಿಲ್ಲ.ಅಲ್ಲಿಗೆ ಬಂದವರ ವೇಷಭೂಷಣಗಳೂ ಸಹ ಅವರೆಲ್ಲರೂ ಸಿರಿವಂತರು ಎಂಬುದನ್ನು ನಿರೂಪಿಸುತ್ತಿತ್ತು.ರಾಯರ ಅಂತಸ್ತು ಯಾವ ರೀತಿಯಿಂದ ನೋಡಿದರೂ ಅಲ್ಲಿಗೆ ಬಂದವರ ಕಾಲು ಭಾಗದಷ್ಟೂ ಇರಲಿಲ್ಲ.ಬಹುಶಃ ರಾಯರ ಆಗಮನವನ್ನು ಆವರ ತಮ್ಮ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ.ಬಂದ ಶ್ರೀಮಂತರಿಗೆಲ್ಲಾ ಸ್ವಾಗತ ಕೋರುತ್ತಿದ್ದ ಆತ,ಕುಟುಂಬ ಸಮೇತ ಬಂದಿದ್ದ ರಾಯರನ್ನು ಗಮನಿಸದಂತೆ ಮಾಡಿದ.ಇಡೀ ಗೃಹಪ್ರವೇಶದ ಔತಣಕೂಟ ಮುಗಿದರೂ,ಸೌಜನ್ಯಕ್ಕೂ ಒಂದೆರಡು ಮಾತುಗಳನ್ನು ಆಡಲಿಲ್ಲ ಆತ.ಆತನ ಹೆಂಡತಿಯಂತೂ ಕತ್ತೆತ್ತಿ ಇವರೆಡೆಗೆ ನೋಡಲೂ ಇಲ್ಲ.ಅಷ್ಟೇ ಅಲ್ಲದೆ ಅಲ್ಲಿ ನೆರೆದಿದ್ದ ಕೆಲವು ಬಂಧುಗಳೆನಿಸಿಕೊಂಡವರೂ ಕೂಡ ತಮ್ಮ ಅಂತಸ್ತಿಗೆ ತಕ್ಕವರೊಡನೆ ಮಾತುಕತೆಯಲ್ಲಿ ನಿರತರಾಗಿದ್ದರು.ಇದೆಲ್ಲವನ್ನೂ ನೋಡಿದ ರಾಯರಿಗೆ ಬಂದದ್ದೇ ತಪ್ಪು ಎನ್ನಿಸಿಬಿಟ್ಟಿತು.ಊಟವನ್ನೂ ಸರಿಯಾಗಿ ಮಾಡಲಾಗಲಿಲ್ಲ.ರಾಯರ ಹೆಂಡತಿಯಂತೂ,ದಾರಿಯುದ್ದಕ್ಕೂ ಬೈದುಕೊಂಡೇ ಬಂದರು.ಅಂದೇ ಕೊನೆ ರಾಯರು ತಮ್ಮ ಕುಟುಂಬದವರ ಯಾವ ವಿಶೇಷ ಸಮಾರಂಭಕ್ಕೂ ಹೋಗುತ್ತಿರಲಿಲ್ಲ.
          ********************************************************
ಹಳೆಯ ನೆನಪು ಮತ್ತೆ ಭಾಸ್ಕರನ ಮುಖದ ಮಂದಸ್ಮಿತಕ್ಕೆ ಕಾರಣವಾಯಿತು.ಯಾವ ಬಳಗ ತಮ್ಮ ಇರುವಿಕೆಯನ್ನು ಅವಮಾನ ಎಂದು ಭಾವಿಸುತ್ತಿದ್ದರೋ,ಅವರೇ ಈ ದಿನ ಕುಟುಂಬ ಸಮೇತ ಬಂದು ಆಹ್ವಾನ ಕೊಡುತ್ತಿದ್ದಾರೆ.ಅಷ್ಟಕ್ಕೂ ಬದಲಾಗಿರುವುದು ಏನು? ಎಂಬ ಆಲೋಚನೆ ಆತನಲ್ಲಿ ಬಂದಿತು.ಮುಂಚೆ ಆಟೋಗಳಲ್ಲಿ,ಬಸ್ಸುಗಳಲ್ಲಿ ಹೋಗುತ್ತಿದ್ದವರು ಇಂದು ಐಷಾರಾಮಿ ಕಾರಿನಲ್ಲಿ ಪಯಣಿಸುತ್ತಿದ್ದರು.ಹಂಚಿನ ಮನೆಯ ಜಾಗದಲ್ಲಿ ಅರಮನೆಯಂತ ಮಹಲು ಬಂದಿದೆ.ಬಯಕೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆಯಿಲ್ಲ.ಬಯಸಿದ್ದನ್ನೆಲ್ಲಾ ಕೊಳ್ಳುವಷ್ಟು ಕಾಸಿದೆ.ಈ ಬದಲಾವಣೆಯೇ ತನ್ನ ಚಿಕ್ಕಪ್ಪನಲ್ಲಿಯೂ ತಮ್ಮ ಮೇಲಿನ ಪ್ರೀತಿಗೆ ಕಾರಣವಾಗಿರಬಹುದು ಎಂದುಕೊಂಡು ಮತ್ತೊಮ್ಮೆ ನಕ್ಕನು ಭಾಸ್ಕರ."ಸಂಬಂಧಗಳಿಗಲ್ಲ ಬೆಲೆ...ಸವಲತ್ತುಗಳಿಗೆ..ಬರೀ ಸೋಗು.." ಮನಸ್ಸೊಳಗಿನ ಈ ಮಾತು ಮತ್ತೆ ಆತನ ನಗುವಿಗೆ ಕಾರಣವಾಯಿತು.
ರಾತ್ರಿ ಸುಮಾರು ಹತ್ತು ಗಂಟೆಯ ಸಮಯ.ಸೋಫಾದ ಮೇಲೆ ತನ್ನ ಲ್ಯಾಪ್‍ಟಾಪ್‍ನೊಂದಿಗೆ ತಲ್ಲೀನನಾಗಿದ್ದ ಭಾಸ್ಕರನ ಬಳಿ ರಾಯರು ಬಂದು "ಭಾಸ್ಕರ..." ಎಂದು ಕರೆದರು."ಅಪ್ಪಾ.." ಎಂದುಕೊಂಡು ಭಾಸ್ಕರ ತನ್ನ ಲ್ಯಾಪ್‍ಟಾಪ್‍ಅನ್ನು ಪಕ್ಕಕ್ಕೆ ಇಟ್ಟು ಮಾತಿಗೆ ಕುಳಿತನು.
"ಏನಪ್ಪಾ..?" ಎನ್ನುತ್ತಿದ್ದಂತೆ ರಾಯರು "ಏನಿಲ್ಲ ಪುಟ್ಟ...ನಾನೊಂದು ಮಾತು ಹೇಳಬೇಕಿತ್ತು..ನೀನು ಬೇಜಾರು ಮಾಡಿಕೊಳ್ಳಬಾರದು...." ಎನ್ನುತ್ತಿದ್ದಂತೆ ರಾಯರು ಯಾವ ವಿಷಯದ ಬಗ್ಗೆ ಮಾತನಾಡಲು ಬಂದಿದ್ದರು ಎಂಬ ಅರಿವಿತ್ತು.ಆದರೂ ತನ್ನ ತಂದೆಗೆ ಬೇಸರವಾಗಬಾರದೆಂಬ ಕಾರಣದಿದಂದ "ಹೇಳಪ್ಪಾ..." ಎಂದನು.
"ಮದುವೆಗೆ ನೀನು ಬರ್ತೀಯಾ ಅಲ್ವಾ....?!ಹಿಂದೆ ಆಗಿದ್ದೆಲ್ಲಾ ಮರೆತುಬಿಡೋಣ...ಎಷ್ಟೇ ಆಗಲಿ ನಾವೆಲ್ಲ ಒಂದೇ ಬಳ್ಳಿಯ ಹೂಗಳು..." ಎಂದರು.
"ಆ ಪರಿಜ್ಞಾನ ನಿನ್ನ ತಮ್ಮನಿಗೂ ಇರಬೇಕು ಅಲ್ಲವಾ ಅಪ್ಪ...!ನಿಂಗೆ ಯಾಕೆ ಅರ್ಥ ಆಗ್ತಾ ಇಲ್ಲ...ಅವರು ನಮ್ಮ ಶ್ರೀಮಂತಿಕೆಗೆ ಕೊಡುತ್ತಿರೋ ಬೆಲೆ ಇದು...ಈಗ ನಿನಗೂ ಸಮಾಜದಲ್ಲಿ ಒಂದು ಸ್ಥಾನ ಇದೆ..ಹಾಗಾಗಿ ನೀನು ಅವರ ಅಂತಸ್ತಿಗೆ ಸರಿಸಮಾನ ಆಗಿದ್ದೀಯಾ ಅದಕ್ಕೆ ನಿನ್ನನ್ನು ಮದುವೆಗೆ ಕರೀತಾ ಇದ್ದಾರೆ...ಅದೇ ನೀನು ಬಡತನದಲ್ಲಿಯೇ ಇದ್ದಿದ್ದರೆ,ಖಂಡಿತವಾಗಲೂ ಅವರು ನಿಮ್ಮನ್ನ ಮದುವೆಗೆ ಕರೆಯುವ ಮನಸ್ಸು ಮಾಡ್ತಾ ಇರಲಿಲ್ಲ...ಬೆಲೆ ನಿಮಗಲ್ಲ...ವಸ್ತುಗಳಿಗೆ...ಬಿಡಿ ಆ ಬಗ್ಗೆ ಯಾಕೆ ಮಾತಾಡೋದು?....ನಾನು ಬರಲ್ಲ ಅಷ್ಟೇ..." ಮತ್ತೆ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದನು ಭಾಸ್ಕರ."ಪುಟ್ಟ...ನೀನು ಹೇಳಿದ್ದೆಲ್ಲ ನಿಜಾನೇ ಇರಬಹುದು...ಆದರೆ ಅದನ್ನೆಲ್ಲಾ ಆಲೋಚನೆ ಮಾಡುವ ಶಕ್ತಿ,ಆಸಕ್ತಿ ಎರಡೂ ನನಗಿಲ್ಲ..ಇರುವಷ್ಟು ದಿನ ಖುಷಿಯಾಗಿ ಇರಬೇಕು ಅಂತ ಆಸೆ...ಹಾಗಾಗಬೇಕು ಅಂತಾದರೆ ನೀನು ನನ್ನ ಜೊತೆ ಮದುವೆಗೆ ಬರಬೇಕು...ಒಂದು ದಿನ ರಜೆ ತೊಗೋ ಸಾಕು..." ಎಂದು ಮಗನ ಹೆಗಲನ್ನು ತಟ್ಟಿ ಅಲ್ಲಿಂದ ನಿರ್ಗಮಿಸಿದರು ರಾಯರು.
               **************************************************************
ಸುಮಾರು ವರ್ಷಗಳ ನಂತರ ತನ್ನ ಬಳಗದವರ ಸಂತೋಷಕೂಟವೊಂದರಲ್ಲಿ ಸೇರಿಕ್ಕೊಳ್ಳಲಿದ್ದಾನೆ ಭಾಸ್ಕರ.ಅರವತ್ತು ಲಕ್ಷದ ಕಾರಿನಲ್ಲಿ ತನ್ನ ತಂದೆ ತಾಯಿ ಹಾಗೂ ಮಡದಿಯೊಡನೆ ತನ್ನ ಚಿಕ್ಕಪ್ಪನ ಮಗಳ ಮದುವೆಗೆ ಹೋಗುತ್ತಿದ್ದ ಅವನ ಮನಸ್ಸು ಕೇವಲ ತನ್ನ ತಂದೆಯ ಸಂತೋಷಕ್ಕಾಗಿ ಮಾತ್ರ ಒಪ್ಪಿಕೊಂಡಿತ್ತು.ಹಲವು ಬಾರಿ ಹೋಗುವುದು ಬೇಡವೆಂದುಕೊಂಡಿದ್ದರೂ,ಕಡೆಯಲ್ಲಿ ಆತನಿಗೆ ಒಲ್ಲೆ ಎನ್ನಲಾಗಲಿಲ್ಲ.
ಅತಿ ದೊಡ್ಡ ಕಲ್ಯಾಣಮಂಟಪವೊಂದರಲ್ಲಿ ಮದುವೆ ಸಮಾರಂಭ ಏರ್ಪಟಾಗಿತ್ತು.ಕಾರಿನಿಂದ ರಾಯರು ಇಳಿಯುತ್ತಿದ್ದಂತೆ ರಾಯರ ತಮ್ಮ ಹಾಗೂ ಆತನ ಹೆಂಡತಿ ಇಬ್ಬರೂ ರಾಯರ ಕುಟುಂಬವನ್ನು ಸ್ವಾಗತಿಸಿದರು.ಕಾರಿನಲ್ಲಿ ಬಂದದ್ದಕ್ಕೆ ಈ ಯೋಗ ಇರಬಹುದು ಎಂದುಕೊಂಡು ಭಾಸ್ಕರ ಮನಸಿನೊಳಗೆ ನಕ್ಕನು.ತನ್ನ ಬೀಗರಿಗೆ ಹೆಮ್ಮೆಯಿಂದ ಅಣ್ಣನನ್ನು ಪರಿಚಯಿಸಿದ್ದ ರಾಯರ ತಮ್ಮ.
ಮದುವೆಯ ಸಮಾರಂಭದ ವ್ಯವಸ್ಥೆ ಅತ್ಯಂತ ವೈಭವಯುತವಾಗಿಯೇ ಏರ್ಪಾಡಾಗಿತ್ತು.ಒಂದಷ್ಟು ವರ್ಷದ ಕೆಳಗೆ ಯಾವ ಬಳಗದವರೂ ಮಾತನಾಡಲು ಇಷ್ಟ ಪಡದ ರಾಯರ ಸುತ್ತಲೂ ಅದೆಷ್ಟು ಜನ.ಅದೆಷ್ಟು ಹರಟೆ.ರಾಯರ ಪತ್ನಿಯು ಸಹ ಮಾತುಕತೆಯಲ್ಲಿ ನಿರತರಾಗಿದ್ದರು.ಇದನ್ನೆಲ್ಲ ನೋಡುತ್ತಿದ್ದ ಭಾಸ್ಕರನಿಗೆ ಮತ್ತೊಮ್ಮೆ ಇದೆಲ್ಲಾ ಸೋಗು ಎನಿಸತೊಡಗಿತು."ಸಂಬಂಧಗಳಿಗಲ್ಲ ಬೆಲೆ...ಸವಲತ್ತುಗಳಿಗೆ...." ಮತ್ತೊಮ್ಮೆ ಆತನ ಮನಸ್ಸು ನಕ್ಕಿತು.ತನ್ನ ಬಳಗದವರ ಮಧ್ಯದಿಂದ ರಾಯರು ಮಗನನ್ನೊಮ್ಮೆ ನೋಡಿದರು.ತಂದೆ-ಮಗ ಇಬ್ಬರೂ ನಕ್ಕರು.

Saturday 30 April 2016

ಮಾಘ ಸ್ನಾನ

ಮಾಘ ಸ್ನಾನ

ಅಂಬಮ್ಮನಿಗೆ ವಯಸ್ಸು ಎಂಬತ್ತು ಆಗುತ್ತಾ ಬಂದರೂ ಮುಪ್ಪಿನ ಯಾವ ಕಾಯಿಲೆಗಳು ಅವಳನ್ನು ಭಾದಿಸುತ್ತಿಲ್ಲ.ಸಕ್ಕರೆ ಕಾಯಿಲೆ,ರಕ್ತದೊತ್ತಡ ಈ ರೀತಿಯ ಯಾವ ಕಾಯಿಲೆಗಳು ಅವಳಿಗೆ ಇಲ್ಲ.ಆದರೆ ಅವಳನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಅದು ಬೆನ್ನು ನೋವು.ಅಂಬಮ್ಮನ ಬಳಿ ಆ ನೋವು ಬರುವುದಕ್ಕೂ ಕಾರಣವಿದೆ.ಆಕೆಯ ಬಾಣಂತನದ ಆರೈಕೆ ಸರಿಯಾಗಿ ಆಗದ ಕಾರಣ ಈ ಬೇನೆ ಈಗ ಅವಳ ಬೆನ್ನೇರಿ ಕೂತಿದೆ.
ಯಾರಾದರೂ "ಬೆನ್ನು ನೋವು ಹೇಗಿದೆ ಅಂಬಮ್ಮ??" ಎಂದು ಕೇಳಿದರೆ ಸಾಕು,"ಬಾಣಂತಿಯಾಗಿದ್ದಾಗ ನನಗೂ ಮಾಡಬೇಕಾದದ್ದು ಮಾಡಿದ್ರೆ....ನಂಗೆ ಈ ವಯಸ್ಸಲ್ಲಿ ಈ ನೋವು ಬರ್ತಾ ಇರಲಿಲ್ಲ...ನನ್ನ ಮದುವೆ ಮಾಡಿಕೊಟ್ಟು ನನ್ನ ಅಮ್ಮ ಸತ್ತಳು....ಇನ್ನು ನನ್ನ ಅತ್ತಿಗೆ ತನಗೆ ಬಾಣಂತನ ಮಾಡೋದಕ್ಕೆ ಆಗೋದೇ ಇಲ್ಲ ಅಂದುಬಿಟ್ಟಳು...ಇನ್ನು ನನ್ನ ಅತ್ತೆ,ಪಾಪ ಮುದುಕಿ...ಆಗುವ ಅಷ್ಟು ಮಾಡಿತು...ಅದರಲ್ಲೂ ತಿನ್ನೋದಕ್ಕೆ ಆದ್ರು ಇದ್ಯ...ಇಲ್ಲ ಬಡತನ...ಅದೇನೋ ಗಸಗಸೆ ಲೇಹ ತಿನ್ನಬೇಕು ಅಂತ ಪಂಡಿತರು ಹೇಳಿದ್ರು....ತಿನ್ನುವುದು ಇರಲಿ,ನೋಡಲಿಕ್ಕೂ ದುಡ್ಡಿರಲಿಲ್ಲ....ನಾನು ಬಡತನದ ಬಾಣಂತಿ...." ಎಂದು ತನ್ನ ಬಡತನದ ದಿನಗಳನ್ನು ಹೇಳಿಕೊಂಡು ನಗುತ್ತಿದ್ದಳು ಅಂಬಮ್ಮ.
ಅಂಬಮ್ಮನಿಗೆ ಆಗ ಬಡತನವಿದ್ದರೂ ಈಗ ಏನೂ ಕೊರತೆ ಇಲ್ಲ.ತನ್ನ ವೃದ್ದಾಪ್ಯದ ದಿನಗಳನ್ನು ಮಗನೊಡನೆ ಕಳೆಯುತ್ತಿದ್ದಳು ಅಂಬಮ್ಮ.ಒಳ್ಳೆಯ ಸೊಸೆ,ಮೊಮ್ಮಕ್ಕಳು.ಜೊತೆಗೊಬ್ಬ ಮರಿಮಗ.ಅಂಬಮ್ಮ ತಾನು ಮೆಟ್ಟಿದ ಮನೆಯನ್ನು ಬಿಟ್ಟು ಬಂದು ಸುಮಾರು ಇಪ್ಪತ್ತು ವರ್ಷಗಳೇ ಆಗಿವೆ.ಮಗನ ಓದು,ಮಗಳ ಮದುವೆಗೆಂದು ಇದ್ದ ಆಸ್ತಿಯನ್ನೆಲ್ಲಾ ಮಾರಿಬಿಟ್ಟಿದಳು.ಆ ಬಗ್ಗೆ ಅವಳಿಗೆ ಚೂರು ನೋವಿಲ್ಲ.ಯಾರಾದರೂ "ಅಷ್ಟು ಒಳ್ಳೆ ಆಸ್ತಿ ಮಾರಿದ್ಯಲ್ಲಾ ಅಂಬುಮ್ಮ...!!" ಎಂದರೆ,"ಇಷ್ಟು ಒಳ್ಳೆ ಆಸ್ತಿ ಇರುವಾಗ..ಆ ಆಸ್ತಿ ಯಾವ ಲೆಕ್ಕ..." ಎಂದು ತನ್ನ ಮಗ-ಸೊಸೆಯನ್ನು ತೋರಿಸಿ ಹೇಳುತ್ತಿದ್ದಳು.
***********************************************************************
ಹದಿನಾರು ತುಂಬುವ ಹೊತ್ತಿಗೆ ಗಂಡನ ಮನೆ ಸೇರಿದ್ದಳು ಅಂಬಮ್ಮ.ಆಕೆಯ ಗಂಡನಿಗೆ ಸುಮಾರು ನಲವತ್ತರ ಆಸುಪಾಸು.ಆತನಿಗೆ ಅದು ಎರಡನೇ ಮದುವೆ.ಮೊದಲನೆ ಹೆಂಡತಿ ಕ್ಷಯ ರೋಗಕ್ಕೆ ತುತ್ತಾಗಿ ಹೋಗಿದ್ದಳು.ಆದರೆ ಕೆಲವರು ಆಕೆಗೆ ಮಕ್ಕಳಾಗದ ಕಾರಣ ಗಂಡ ಮತ್ತು ಅತ್ತೆ ಉಸಿರುಗಟ್ಟಿಸಿ ಕೊಂದು ಆಮೇಲೆ ಕ್ಷಯದ ನೆಪ ಒಡ್ಡಿದರು ಎಂದು ಏನೇನೋ ಅಂಬಮ್ಮನ ತಲೆಗೆ ತುಂಬುತ್ತಿದ್ದರು.ಆಕೆಗೆ ಇಪ್ಪತ್ತಾಗುವ ಹೊತ್ತಿಗೆ ಎರಡು ಮಕ್ಕಳಾಗಿದ್ದವು.ಮನೆಯಲ್ಲಿ ಬಡತನ.ಬೇಸಾಯ ಮಾಡಿ ಸಿಗುತ್ತಿದ್ದ ಆದಾಯ ಸಾಲುತ್ತಿರಲಿಲ್ಲ.ಬತ್ತಿ ಮಾಡಿ ಮಾರಿ ಜೊತೆಗೆ ಅವರಿವರ ಮನೆಯ ಅಡುಗೆ ಕೆಲಸ ಮಾಡಿ ಕುಟುಂಬವನ್ನು ತಕ್ಕ ಮಟ್ಟಿಗೆ ನೆಡೆಸಿಕೊಂಡು ಹೋಗುತ್ತಿದ್ದಳು ಅಂಬಮ್ಮ.ಇಪ್ಪತ್ತೈದು ತುಂಬುವ ಹೊತ್ತಿಗೆ ವಿಧವೆಯಾಗಿ ಬಿಟ್ಟಳು.ಎರಡು ಮಕ್ಕಳನ್ನು ಸಾಕಿ,ತಾನೂ ಬದುಕುವುದು ಈಗ ಅಂಬಮ್ಮನಿಗೆ ದೊಡ್ಡ ಸವಾಲಾಯಿತು.ತನ್ನೊಬ್ಬಳಿಗೆ ಬೇಸಾಯ ಮಾಡುವುದು ಕಷ್ಟವಾದಾಗ,ತನ್ನ ಜಮೀನನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಅವರು ವರ್ಷಕ್ಕೆ ಇಂತಿಷ್ಟು ಎಂದು ಕೊಡುವ ಪಾಲಿನಲ್ಲಿ ಜೀವನ ನೆಡೆಸುವ ಪರಿಸ್ಥಿತಿ ಬಂದಿತು.ಅದೆಷ್ಟೋ ಸಲ ಅವಳಿಗೆ ಸಿಗಬೇಕಾದ ಪಾಲು ಸಿಗುತ್ತಲೇ ಇರಲಿಲ್ಲ.ಅದು ಇದು ಸಬೂಬು ಹೇಳಿ ಅವಳ ಜಮೀನನ್ನು ವಹಿಸಿಕೊಂಡು ವ್ಯವಸಾಯ ಮಾಡುತ್ತಿದ್ದವರು ಅವಳಿಗೆ ಮೋಸ ಮಾಡುತ್ತಿದ್ದರು.ಅದು ಆಕೆಗೂ ಗೊತ್ತಿತ್ತು.ಆದರೆ ಎದುರು ಮಾತನಾಡಿದರೆ ಬರುವ ಆದಾಯಕ್ಕೂ ಕುತ್ತು ಬೀಳಬಹುದೆಂಬ ಭಯದಿಂದ ಆಕೆ ಏನೂ ಮಾತನಾಡುತ್ತಿರಲಿಲ್ಲ.ಸಮಯ ಸಿಕ್ಕಿದಾಗ ಮಾತ್ರ ಮಾಡುತ್ತಿದ್ದ ಬತ್ತಿ ಮಾಡುವ,ಅಡುಗೆಯ ಕೆಲಸಗಳು ಈಗ ಹೊಟ್ಟೆ ಹೊರೆಯುವ ಮೂಲ ಸಾಧನಗಳಾದವು.
ಅಂಬಮ್ಮ ಅಂದು ಹೀಗೆ ಯಾರದೋ ಮನೆಯ ಅಡುಗೆ ಕೆಲಸಕ್ಕೆ ಹೋಗಿದ್ದಳು.ಅಲ್ಲಿ ಬಂದವರೆಲ್ಲಾ ಮಾಘ ಸ್ನಾನದ ಬಗ್ಗೆ ಮಾತನಾಡುತ್ತಿದ್ದರು.ಮಾಘ ಮಾಸದಲ್ಲಿ ಪವಿತ್ರ ಸ್ನಾನ ಮಾಡಿದರೆ ತೀರ್ಥ ಯಾತ್ರೆಯ ಪುಣ್ಯ ಲಭಿಸುವುದೆಂದೂ,ಅಲ್ಲದೆ ಕಷ್ಟಗಳೆಲ್ಲಾ ದೂರವಾಗುವುದೆಂದು ಹೀಗೆ ಮಾಘ ಸ್ನಾನದ ಮಹತ್ತ್ವವನ್ನು ಕುರಿತು ಚರ್ಚಿಸುತ್ತಿದ್ದರು.ಯಾವತ್ತೂ,ಯಾವುದೇ ಪುಣ್ಯ ಕ್ಷೇತ್ರಗಳ ದರ್ಶನ ಮಾಡದ ಅಂಬಮ್ಮನಿಗೂ ಮಾಘ ಸ್ನಾನ ಮಾಡುವ ಆಸೆಯಾಯಿತು.ಆದರೆ ತನ್ನ ಊರನ್ನು ಬಿಟ್ಟು ಬೇರೆ ಊರು ಕಾಣದ ಅಂಬಮ್ಮನಿಗೆ,ಸುಮಾರು ನಲವತ್ತು ಮೈಲು ದೂರವಿದ್ದ ಬ್ರಾಹ್ಮಿಪುರಕ್ಕೆ ಒಬ್ಬಳಿಗೆ ಹೋಗಲು ಭಯವಾಯಿತು.ಆಗ ಅವಳ ನೆರವಿಗೆ ಬಂದದ್ದು,ಪ್ರಭಕ್ಕ.ಆಕೆ ಪ್ರತಿ ವರ್ಷವೂ ಮಾಘ ಸ್ನಾನಕ್ಕೆ ಹೋಗುತ್ತಿದ್ದಳು.ಹಾಗಾಗಿ ಅಂಬಕ್ಕ ಪ್ರಭಕ್ಕನಿಗೆ,"ಪ್ರಭಕ್ಕ...ಇನ್ನೊಂದು ಸಲ ಮಾಘ ಸ್ನಾನಕ್ಕೆ ಹೋಗುವಾಗ ನಾನು ನಿಮ್ಮ ಜೊತೆ ಬರುತ್ತೇನೆ" ಎಂದಿದ್ದಳು.ಪ್ರತಿ ವರ್ಷವೂ ಅಂಬಮ್ಮ ಮತ್ತು ಪ್ರಭಕ್ಕ ಮಾಘ ಸ್ನಾನಕ್ಕೆ ಒಟ್ಟಿಗೆ ಹೋಗುತ್ತಿದ್ದರು.
ಬ್ರಾಹ್ಮಿಪುರಕ್ಕೆ ಇದ್ದ ಸುಮಾರು ಮೂವತ್ತೈದು ಮೈಲಿಯನ್ನು,ಮೂರು ಬಸ್ಸು ಬದಲಿಸಿ ಹೋಗಬೇಕು.ಉಳಿದ ಐದು ಮೈಲಿಯನ್ನು ನೆಡೆದೇ ಹೋಗಬೇಕು.ಸ್ವಲ್ಪ ದುಡ್ಡು ಕೊಟ್ಟರೆ ಎತ್ತಿನ ಗಾಡಿಯಲ್ಲಿಯೋ,ಕುದುರೆ ಗಾಡಿಯಲ್ಲಿಯೋ ಸಾಗಬಹುದು.ಆದರೆ ಇನ್ನುಳಿದ ಎರಡು ಮೈಲಿಗೆ ಯಾವುದೇ ತರಹದ ವಾಹನವಿಲ್ಲ ನೆಡೆದೇ ಸಾಗಬೇಕು.ಅಂಬಮ್ಮ ಮಾತ್ರ ಐದೂ ಮೈಲಿ ನೆಡೆದೇ ಸಾಗುತ್ತಿದ್ದಳು.ಎತ್ತಿನ ಗಾಡಿಗೆ ಕೊಡುವ ದುಡ್ಡಿನಲ್ಲಿ ತನ್ನ ಮಕ್ಕಳಿಗೆ ಪಂಚಕಜ್ಜಾಯ ತೆಗೆದುಕೊಂಡು ಹೋಗುತ್ತಿದ್ದಳು.ಸುಮಾರು ಒಂದು ಮೈಲಿ ದೂರದಿಂದಲೇ ಬ್ರಾಹ್ಮಿ ನದಿಯು ಹರಿಯುವ ಆ ಸದ್ದು ಕೇಳುತ್ತಿತ್ತು.
ಮಾಘ ಸ್ನಾನಕ್ಕೆಂದು ಸಾಕಷ್ಟು ಜನ ಬ್ರಾಹ್ಮಿಪುರಕ್ಕೆ ಬರುತ್ತಿದ್ದರು.ಉಕ್ಕಿ ಹರಿಯುವ ಬ್ರಾಹ್ಮಿಯಲ್ಲಿ ಮಿಂದು,ನದಿಯ ತಟದಲ್ಲಿ ನೆಲೆಯಾಗಿದ್ದ ದುರ್ಗೆಯ ದರ್ಶನ ಪಡೆಯುತ್ತಿದ್ದರು.ಅಂಬಮ್ಮ,ಬ್ರಾಹ್ಮಿಪುರಕ್ಕೆ ಮಾಘ ಸ್ನಾನಕ್ಕೆಂದು ಬರುವ ಜನರಲ್ಲಿ ಒಬ್ಬಳಾಗಿಬಿಟ್ಟಳು.ಸ್ನಾನ ಮುಗಿಸಿ ಮತ್ತೆ ಅದೇ ದಾರಿಯಲ್ಲಿ ನಡೆದು,ಮತ್ತೆ ಮೂರು ಬಸ್ಸು ಬದಲಿಸಿ ಮನೆ ಸೇರುವ ಹೊತ್ತಿಗೆ ಸಂಜೆ ಆರು ಗಂಟೆಯಾಗುತ್ತಿತ್ತು.ಅಂಬಮ್ಮ ಪ್ರತಿ ವರ್ಷವೂ ಒಂದು ಕಟ್ಟುನಿಟ್ಟಿನ ವ್ರತದಂತೆ ಮಾಘ ಸ್ನಾನ ಮಾಡುತ್ತಿದ್ದಳು.
**************************************************************************
ತನ್ನ ಊರನ್ನು ಬಿಟ್ಟು ವರ್ಷಗಳೇ ಆಗಿದ್ದ ಅಂಬಮ್ಮನಿಗೆ ಅದೇಕೋ ಬ್ರಾಹ್ಮಿ ನದಿಯಲ್ಲಿ ಮಾಘ ಸ್ನಾನ ಮಾಡಬೇಕೆಂದೆನಿಸಿತು.ತನ್ನ ಆಸೆಯನ್ನು ಮಗನಲ್ಲಿ ನಿವೇದಿಸಿಕೊಂಡಳು.ಮಗನಿಗೂ ಅರವತ್ತರ ಆಸುಪಾಸು.ತನ್ನ ತಾಯಿಗೆ ಬೇರೆ ಬಹಳ ವಯಸ್ಸಾಗಿದೆ.ತಾಯಿ ಎಂದೂ ಏನೂ ಕೇಳಿದವಳಲ್ಲ.ಈ ಆಸೆಗೆ ಇಲ್ಲ ಎನ್ನಬಾರದು ಎಂದು ಅವನ ಮನಸ್ಸು ಮಿಡಿಯುತ್ತಿದ್ದರೂ ಬುದ್ದಿ ಮಾತ್ರ ಒಲ್ಲೆ ಎನ್ನುತ್ತಿತ್ತು.ವಯಸ್ಸಾದ ತಾಯಿ ಆ ನದಿಯಲ್ಲಿ ಸ್ನಾನ ಮಾಡುವಾಗ ಏನಾದರೂ ಹೆಚ್ಚು ಕಮ್ಮಿ ಆದರೆ ಎಂಬ ಭಯ ಅವನಿಗೆ.ಆತ ನಯವಾಗಿಯೇ "ಅಮ್ಮ....ನೀನು ಆಗಲೇ ಗಂಗಾಸ್ನಾನ ಮಾಡಿದ್ದೀ....ಇನ್ನೂ ಯಾಕಮ್ಮ ಈ ಮಾಘ ಸ್ನಾನದ ಆಸೆ...ಬೇಡಮ್ಮ...ನಿನಗೂ ವಯಸ್ಸಾಗಿದೆ...ನನಗೂ ವಯಸ್ಸಾಗ್ತಾ ಇದೆ....ನಿನ್ನನ್ನ ಈ ವಯಸ್ಸಲ್ಲಿ ಅಷ್ಟು ದೂರ ಕರೆದುಕೊಂಡು ಹೋಗಬೇಕು ಅಂದ್ರೆ ನಂಗೂ ಕಷ್ಟ ಆಗುತ್ತೆ...." ಎಂದನು.ಮಗನಿಗೆ ಕಷ್ಟ ಆಗುವುದು ಎಂಬ ಒಂದೇ ಕಾರಣದಿಂದ ಅಂಬಮ್ಮ ತನ್ನ ಆಲೋಚನೆಯಿಂದ ದೂರ ಸರಿದಳು.
ರಾತ್ರಿ ಸುಮಾರು ಹತ್ತುವರೆ ಗಂಟೆಯಾಗಿತ್ತು.ಅಂಬಮ್ಮ ಮೆಲ್ಲಗೆ ತನ್ನ ಪ್ರೀತಿಯ ಮೊಮ್ಮಗ ವಾಸುವಿನ ಕೋಣೆಯ ಬಾಗಿಲು ತೆಗೆದು ಒಳಗೆ ಇಣುಕಿದಳು.ಆತ ತನ್ನ ಲ್ಯಾಪ್‍ಟಾಪ್‍ನೊಡನೆ ತಲ್ಲೀನನಾಗಿದ್ದ."ವಾಸು...ನೀನಿನ್ನೂ ಮಲಗಿಲ್ವಾ....??" ಅಂಬಮ್ಮ ಕೇಳಿದಳು.
"ಆ ಪ್ರಶ್ನೆ ನಾನು ನಿನ್ನನ್ನು ಕೇಳಬೇಕು...ನೀನಿನ್ನೂ ಮಲಗಿಲ್ವಾ..??" ಎಂದು ನಕ್ಕನು.ಅಂಬಮ್ಮಳು ನಕ್ಕಳು.
"ವಾಸು...ನಂಗೊಂದು ಆಸೆ ಇದೆ ಕಣೋ..." ಅಂಬಮ್ಮ ಹೇಳಿದಳು.
"ನನ್ನ ಮದುವೆ ವಿಷಯ ಆದ್ರೆ ಮಾತ್ರ ಹೇಳಬೇಡ...ಅಣ್ಣ ಮದ್ವೆ ಆಗಿದ್ದಾನೆ ತಾನೇ??...ಒಬ್ಬ ಮರಿಮಗ ಇದ್ದಾನೆ ತಾನೇ??..." ಎಂದು ಮತ್ತೊಮ್ಮೆ ನಕ್ಕನು.
"ಅದಲ್ವೋ ಮಾರಾಯ...ನಂಗೆ ಬ್ರಾಹ್ಮಿಪುರಕ್ಕೆ ಮಾಘ ಸ್ನಾನಕ್ಕೆ ಹೋಗಬೇಕು.." ಎಂದು ತನ್ನ ಆಸೆಯನ್ನು ವಿವರವಾಗಿ ಮೊಮ್ಮಗನಿಗೆ ಹೇಳಿದಳು.ಜೊತೆಗೆ ಆ ಊರಿಗೆ ಹೋಗಲು ಐದು ಮೈಲಿ ನೆಡೆಯಬೇಕು ಎಂದೂ ಹೇಳಿದಳು.
"ಅಷ್ಟೇನಾ...!!ನನ್ನ ಮದುವೆ ಬಿಟ್ಟು ನಿನ್ನ ಯಾವ ಆಸೆ ಆದ್ರು ಅದನ್ನ ನಾನು ಪೂರೈಸ್ತೀನಿ..." ಎಂದು ನಗುತ್ತಾ "ಯಾವ ಊರು ಅಂದೆ.." ಎಂದು ಕೇಳಿದನು.
"ಬ್ರಾಹ್ಮಿಪುರ...."ಖುಷಿಯಿಂದ ಹೇಳಿದಳು ಅಂಬಮ್ಮ.
ವಾಸು ತನ್ನ ಲ್ಯಾಪ್‍ಟ್ಯಾಪ್‍ನಲ್ಲಿ ಏನೋ ನೋಡಿದಂತೆ ಮಾಡಿ "ನೆಡೆಯೋದೇನು ಬೇಡ ಅಜ್ಜಿ...ದೇವಸ್ಥಾನದ ತನಕವೂ ಕಾರು ಹೋಗುತ್ತೆ...??" ಎಂದನು.
"ಇಲ್ಲ...ಇಲ್ಲ...ನಿಂಗೆ ಯಾರು ಹೇಳಿದ್ದು??ಐದು ಮೈಲಿ ನಡೀಬೇಕು...." ಎಂದಳು ಅಂಬಮ್ಮ.
"ಇಲ್ಲ ಅಜ್ಜಿ...ಇಲ್ಲಿ ನೋಡು..." ಎನ್ನುತ್ತಾ ತನ್ನ ಲ್ಯಾಪ್‍ಟ್ಯಾಪ್‍ನ ಪರದೆಯನ್ನು ಅಜ್ಜಿಯ ಕಡೆ ತೋರಿಸುತ್ತಾ ಹೇಳಿದನು.
"ಇದೆಲ್ಲಾ ನಂಗೆ ಗೊತ್ತಾಗುತ್ತಾ...??" ಎಂದಳು.
"ಸರಿ ಬಿಡು...ಯಾವಾಗ ಹೋಗಬೇಕು..??" ಎಂದು ಕೇಳಿದನು.
"ಈ ಭಾನುವಾರ...ಆದ್ರೆ ನಿನ್ನ ಅಪ್ಪ ಒಪ್ಪುತ್ತಾ ಇಲ್ಲಾ ಮಾರಾಯ..." ಎಂದು ತನ್ನ ತಳಮಳ ತೋಡಿಕೊಂಡಳು.
"ನಾನು ಒಪ್ಪಿಸ್ತೇನೆ....ನೀನು ಆರಾಮಾಗಿ ಹೋಗಿ ಮಲ್ಕೋ....." ಎಂದು ವಾಸು ಹೇಳಿದನು.
"ವಾಸಣ್ಣ ಅಂದ್ರೆ ವಾಸಣ್ಣ..." ಎನ್ನುತ್ತಾ ತನ್ನ ಮೊಮ್ಮಗನ ದೃಷ್ಟಿ ತೆಗೆದು ತನ್ನ ಕೋಣೆಯ ಕಡೆಗೆ ಹೆಜ್ಜೆ ಹಾಕಿದಳು ಅಂಬಮ್ಮ.
**********************************************************************************************************
"ಸರ್...ಇಲ್ಲಿಂದ ಸುಮಾರು ಒಂದು ಎರಡು ಕಿಲೋಮೀಟರ್ ಮುಂದೆ ಹೋಗಿ,ಅಲ್ಲಿ ಒಂದು ಕಮಾನು ಸಿಗುತ್ತೆ,ಅಲ್ಲಿಂದ ಎಂಟು ಕಿಲೋಮೀಟರ್ ಒಳಗೆ ಹೋದರೆ ಬ್ರಾಹ್ಮಿಪುರ ಸಿಗುತ್ತೆ.." ವಾಸು ಕೇಳಿದ ಪ್ರಶ್ನೆಗೆ ದಾರಿಹೋಕನೊಬ್ಬ ವಿವರ ನೀಡಿದನು.
ಅಜ್ಜಿಯನ್ನು ಕರೆದುಕೊಂಡು ಬಂದ ವಾಸು,ಬ್ರಾಹ್ಮಿಪುರಕ್ಕೆ ಕೆಲವೇ ಮೈಲುಗಳ ದೂರದಲ್ಲಿದ್ದ.
"ಐದು ಮೈಲಿ ನಡೀಬೇಕು....ನಿಂಗೆ ಆಗುತ್ತೊ ಇಲ್ವೋ??....ನಾನು ಹೋಗಿ ಬರ್ತೇನೆ..." ಎಂದು ಅಂಬಮ್ಮ ಅದೆಷ್ಟೋ ಬಾರಿ ಹೇಳಿದಳು.
"ಅಯ್ಯೋ ಅಜ್ಜಿ...ಅಲ್ಲಿ ತನಕನೂ ಕಾರು ಹೋಗುತ್ತೆ....ನೀನು ಸುಮ್ಮನೆ ಬಾ,ನಾನು ಕರೆದುಕೊಂಡು ಹೋಗುತ್ತೀನಿ...." ಎಂದು ವಾಸು ಪ್ರತಿ ಬಾರಿಯೂ ಹೇಳುತ್ತಿದ್ದನು.
ಅಂಬಮ್ಮ ಕಾರಿನ ಹೊರಗಿನ ಕಿಟಕಿಯಲ್ಲಿ ಇಣುಕುತ್ತಿದ್ದಳು.ತಾನು ನೆಡೆದು ಹೋಗುತ್ತಿದ್ದ ದಾರಿಯ ಕುರುಹು ಆಕೆಗೆ ಕಾಣಿಸುತ್ತಲೇ ಇರಲಿಲ್ಲ.
ಬರಿಯ ಮರಗಳೇ ಇದ್ದ ಆ ಕಾಡು ಈಗ ಮರಗಳೇ ಇಲ್ಲದ ನಾಡಾಗಿದೆ."ವಾಸು ದಾರಿ ತಪ್ಪಲಿಲ್ಲ ಅಲ್ಲಾ...??" ಎಂದು ಮೊಮ್ಮಗನನ್ನು ಪದೇ ಪದೇ ಕೇಳುತ್ತಿದ್ದಳು."ಇಲ್ಲಾ ಅಜ್ಜಿ...ನೀನು ಸುಮ್ಮನೆ ಬಾ...ಈಗ ದೇವಸ್ಥಾನದ ತನಕವೂ ರೋಡ್ ಆಗಿದೆ...." ಎಂದು ಹೇಳುತ್ತಿದ್ದನು."ಇನ್ನೊಂದು ಕಿಲೋಮೀಟರ್ ಅಷ್ಟೇ...ಬ್ರಾಹ್ಮಿಪುರ ಬಂದೇ ಬಿಡುತ್ತೆ..." ಎಂದನು ವಾಸು.
ಅಂಬಮ್ಮಳ ಕಿವಿ ನೆಟ್ಟಗಾಯಿತು.ಆಕೆ ಬ್ರಾಹ್ಮಿ ನದಿ ಹರಿಯುವ ಸದ್ದಿಗೆ ಕಿವಿಗೊಡುತ್ತಿದ್ದಳು.ಆದರೆ ಸದ್ದು ಕೇಳುತ್ತಲೇ ಇರಲಿಲ್ಲ.ಮತ್ತೊಮ್ಮೆ ಅವಳಿಗೆ ತಾವು ಸಾಗುತ್ತಿರುವ ದಾರಿಯ ಮೇಲೆ ಸಂಶಯ ಬಂದಿತು.ಆದರೆ ಮೊಮ್ಮಗನನ್ನು ಮತ್ತೊಮ್ಮೆ ಕೇಳುವುದು ಬೇಡವೆಂದು ಸುಮ್ಮನಾದಳು.
"ಬಂತು ನೋಡಜ್ಜಿ ನಿನ್ನ ಅಲ್ಲಲ್ಲಾ ನಮ್ಮ ಬ್ರಾಹ್ಮಿಪುರ...." ಎಂದು ಕಾರು ನಿಲ್ಲಿಸಿ ಅಂಬಮ್ಮಳನ್ನು ಕೆಳಗಿಳಿಸಿದನು ವಾಸು.
ಎಲ್ಲಿ ನೋಡಿದರಲ್ಲಿ ಜನ.ಎಲ್ಲರೂ ಮಾಘ ಸ್ನಾನಕ್ಕೆ ಬಂದವರು.ಆದರೆ ಅವರು ಯಾರು ಬ್ರಾಹ್ಮಿಯಲ್ಲಿ ಮುಳುಗುತ್ತಿರಲಿಲ್ಲ.ಬದಲಿಗೆ ಕೈಯಲ್ಲಿ ಕೊಡಪಾನವನ್ನು ಹಿಡಿದು ತಲೆಗೆ ನೀರು ಸುರಿದುಕೊಳ್ಳುತ್ತಿದ್ದರು.
"ಅಜ್ಜಿ...!!" ಮೊಮ್ಮಗನ ಕೂಗಿಗೆ ಅಂಬಮ್ಮ ಅವನೆಡೆಗೆ ತಿರುಗಿದಳು."ಎರಡು ಕೊಡ ಸಾಕಲ್ವಾ ಸ್ನಾನಕ್ಕೆ....??" ಎಂದು ಪ್ರಶ್ನಿಸಿದನು.
ಅಂಬಮ್ಮ ಅವನ ಮುಖವನ್ನು ಏನೂ ತೋಚದಂತೆ ನೋಡತೊಡಗಿದಳು.ಅವಳ ಸಂಶಯದ ಅರಿವಾಗಿ ವಾಸು,"ಅಜ್ಜಿ...ಈಗ ಈ ನದಿಯಲ್ಲಿ ನೀರು ಕಡಿಮೆ ಇದೆಯಂತೆ,ಅದಕ್ಕೆ ಕೊಡಪಾನದಲ್ಲಿ ನೀರು ಮಾರ್ತಾ ಇದ್ದಾರೆ...ಎರಡು ಕೊಡಪಾನ ಸಾಕಾ ಅಜ್ಜಿ??" ಎಂದು ಮತ್ತೊಮ್ಮೆ ಕೇಳಿದನು.
ಅಂಬಮ್ಮ ಸುತ್ತಲೂ ನೋಡಿದಳು.ಎಲ್ಲರೂ ನೀರು ಕೊಳ್ಳುವುದರಲ್ಲಿ,ಮಾರುವುದರಲ್ಲಿ ತಲ್ಲೀನರಾಗಿದ್ದರು.ಚಿಕ್ಕ ಕೊಡಪಾನದ ನೀರಿಗೆ ಒಂದು ಕ್ರಯವಾದರೆ,ದೊಡ್ಡ ಕೊಡಪಾನಕ್ಕೆ ಮತ್ತೊಂದು ಕ್ರಯ.ಸ್ವಚ್ಛ ನೀರಿನಲ್ಲಿ ಸ್ವಚ್ಛಂದವಾಗಿ ಮೀಯುತ್ತಿದ್ದ ಅಂಬಮ್ಮನಿಗೆ ಈ ಪದ್ದತಿ ಅದೇಕೋ ಸರಿ ಕಾಣಲಿಲ್ಲ.ಅರ್ಧ ನದಿ ಅದಾಗಲೇ ಮಾಯವಾಗಿ,ನೀರು ಮಾರುವ ಅಂಗಡಿಯ ಜಾಗವಾಗಿತ್ತು.ಇನ್ನುಳಿದ ಅರ್ಧ ನದಿಯಲ್ಲಿ ಒಂದು ಮುಳುಗು ಹಾಕುವಷ್ಟೂ ನೀರು ಇರಲಿಲ್ಲ.ಮನಸ್ಸಿಲ್ಲದ ಮನಸ್ಸಿನಿಂದ ಕೊಡಪಾನದ ನೀರನ್ನು ತಲೆಯ ಮೇಲೆ ಸುರಿದುಕೊಂಡಳು ಅಂಬಮ್ಮ.ಅದೇಕೋ ಅವಳಿಗೆ ಒಂದೆ ಕೊಡಪಾನದ ನೀರು ಸಾಕೆನಿಸಿತು.ಅಜ್ಜಿ,ಮೊಮ್ಮಗ ದೇವರ ದರ್ಶನ ಮಾಡಿ ಮನೆಯ ದಾರಿ ಹಿಡಿದರು.
"ಅಜ್ಜಿ ಖುಷಿ ಆಯ್ತಾ...ಇನ್ನು ನನ್ನನ್ನು ಮದುವೆ ಆಗು ಅಂತ ಹೇಳಬೇಡ..." ಎಂದು ನಕ್ಕನು ವಾಸು.ಆದರೆ ಈ ಬಾರಿ ಅಂಬಮ್ಮ ನಗಲಿಲ್ಲ.
"ಯಾಕಜ್ಜಿ ಖುಷಿ ಆಗಲಿಲ್ವಾ.....??" ಎಂದು ಕೇಳಿದನು.
"ವಾಸಣ್ಣಾ.....ಈ ದಾರಿಯಲ್ಲೆಲ್ಲಾ ಎಷ್ಟು ಹಸಿರಿತ್ತು ಗೊತ್ತಾ??ಒಂದು ಮೈಲಿ ಹಿಂದಿನಿಂದಲೇ ಬ್ರಾಹ್ಮಿಯ ಸದ್ದು ಹಾಗೆ ಕಿವಿಗೆ ಬಡಿತಿತ್ತು...ಮೂರು ಬಸ್ಸು ಬದಲಾಯಿಸಿ,ಐದು ಮೈಲಿ ನೆಡೆದು ಬಂದು ಸ್ನಾನ ಮಾಡಿ ಹೋಗ್ತಾ ಇದ್ದೆ ಪ್ರತಿ ವರ್ಷ.....ಬಹಳ ತ್ರಾಸು ಮಾಡಿಕೊಂಡು ಬಂದರೂ ಈ ಪ್ರಕೃತಿಯ ಆಡಂಬರದಲ್ಲಿ ಸುಸ್ತು ಹೋಗಿ,ಆರಾಮಾಗಿ ಹೋಗ್ತಾ ಇದ್ದೆ....ಆದ್ರೆ ಈಗ....." ಎಂದು ಮಾತು ಮುಂದುವರೆಸಲಿಲ್ಲ ಅಂಬಮ್ಮ.
"ಈಗ ಆರಾಮಾಗಿ ಬಂದಿದ್ದೀಯಲ್ಲಾ ಅಜ್ಜಿ....ಅಷ್ಟು ಕಷ್ಟ ಪಡೋದೆ ಬೇಡ ಅಲ್ಲವಾ....??" ಎಂದನು ವಾಸು.
"ಆರಾಮಾಗಿ ಬಂದು...ತ್ರಾಸಿನಲ್ಲಿ ಹೋಗ್ತಾ ಇದ್ದೀನಿ...." ಎಂದಳು ಅಂಬಮ್ಮ.
"ಸುಸ್ಸಾಯ್ತಾ ಅಜ್ಜಿ....!!" ಎಂದು ಪ್ರೀತಿಯಿಂದ ಕೇಳಿದನು ವಾಸು.
"ಹೌದು....ದೇಹಕ್ಕಲ್ಲ....ಮನಸ್ಸಿಗೆ...ಮನುಷ್ಯನಿಗೆ ಆರಾಮಾದಷ್ಟೂ ಪ್ರಕೃತಿಗೆ ಕಷ್ಟ.....ಎಲ್ಲಾ ಬದಲಾಗಿದೆ....ಎಲ್ಲವೂ ವ್ಯವಹಾರವಾಗಿದೆ....ಸ್ವತಂತ್ರವಾಗಿ ಹರಿಯುವ ನೀರಿಗೂ ದುಡ್ಡು ಕೊಡುವ ಪರಿಸ್ಥತಿ.....ಬೇಡ ಇತ್ತು ನಂಗೆ ಇಂತಹ ಮಾಘ ಸ್ನಾನ.....ನೋವಾಗುತ್ತೆ ನಂಗೆ ಬ್ರಾಹ್ಮಿ ನದಿಯನ್ನ,ಬ್ರಾಹ್ಮಿಪುರವನ್ನ,ಬ್ರಾಹ್ಮಿಪುರದ ದುರ್ಗಾ ಪರಮೇಶ್ವರಿಯನ್ನ ನೋಡಿದರೆ...." ಎಂದಾಗ ವಾಸುವಿಗೆ ಏನೂ ಹೇಳಬೇಕೋ ತಿಳಿಯದೆ ತಾನು ಚಲಿಸುತ್ತಿದ್ದ ಕಾರಿಗೆ ಬ್ರೇಕ್ ಹಾಕಿದನು.

Tuesday 8 March 2016

ಪತ್ರೋಡೆ

ಪತ್ರೋಡೆ
(ಪತ್ರೋಡೆ-ಇದು ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೆಸು ಎಲೆಯಿಂದ ಮಾಡುವ ಖಾರದ ತಿಂಡಿ)
ಹತ್ತನೆ ತರಗತಿಯಾದ್ದರಿಂದ ಪ್ರದೀಪ ಬರುವುದು ಆ ದಿನ ಎಂದಿನಂತೆಯೇ ತಡವಾಗಿತ್ತು.ಜೀವನದ ಅತ್ಯಂತ ದೊಡ್ಡ ಮೈಲಿಗಲ್ಲು ಹತ್ತನೇ ತರಗತಿ ಎಂದೆಲ್ಲಾ ಹೇಳಿ ಆತನ ಶಿಕ್ಷಕರು ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.ಆದ್ದರಿಂದ ಐದು ಗಂಟೆಗೆ ತರಗತಿಗಳು ಮುಗಿದಿದ್ದರು,ಸ್ಪೆಷಲ್ ಕ್ಲಾಸ್‍ನ ದೆಸೆಯಿಂದಾಗಿ ಆತ ಬರುವುದು ಏನಿಲ್ಲವೆಂದರೂ ಸುಮಾರು ಏಳು ಗಂಟೆ ಆಗಿರುತಿತ್ತು.ಹಸಿವಿನಿಂದ ಮಗ ಬರುವುದನ್ನು ತಿಳಿದ ತುಳಸಿ ಆತನಿಗಾಗಿ ನಿತ್ಯವೂ ಏನಾದರೂ ಮಾಡಿ ಇಡುತ್ತಿದ್ದಳು.ಆತ ಬದುವುದನ್ನೇ ಕಾಯುತ್ತಿದ್ದ ಆಕೆ,ಮನೆಯ ಮುಂಬಾಗಿಲಿನ ಗೇಟಿನ ಸದ್ದಾದೊಡನೆ,ಮಾಡಿದ ತಿಂಡಿಯನ್ನು ಪ್ಲೇಟಿಗೆ ಹಾಕಿ,ಅತನ ಎದುರಿಗೆ ತಂದಿಟ್ಟಳು.
"ಇವತ್ತೂ ಪತ್ರೋಡೆನಾ...??" ಪ್ರದೀಪನ ರಾಗ. "ಸುಮಾರು ದಿನ ಆಯ್ತಲ್ಲಾ ಮಾರಾಯ ಮಾಡದೇ....ಆ ತೋಟದ ಮನೆಯ ಆಂಟಿ ಇದ್ದಾರಲ್ಲ ಅವರು ಇವತ್ತು ತೋಟಕ್ಕೆ ಹೋಗಿದ್ದರಂತೆ...ಪಾಪ,ನಮ್ಮ ಮನೆಗೆ ಅಂತಾ ಹೇಳಿ ಕೆಸು ತಂದು ಕೊಟ್ಟರು....ಹಸಿ ಹಸಿ ಇತ್ತು ಎಲೆ...ಆದ್ದರಿಂದ ಇವತ್ತೆ ಏನಾದರೂ ಮಾಡಬೇಕು ಅಂತಾ ಪತ್ರೋಡೆ ಮಾಡಿದೆ..." ಎಂದು ಮಗ ಕೇಳಿದ ಪ್ರಶ್ನೆಗೆ ಪತ್ರೋಡೆಯ ವೃತ್ತಾಂತವನ್ನೇ ವಿವರಿಸಿದಳು ತುಳಸಿ.
"ಅಯ್ಯೋ...ಇದನ್ನೆಲ್ಲಾ ಯಾಕೆ ಹೇಳ್ತಿದ್ದೀಯಾ...??ಮೊದಲೇ ಇವತ್ತು ಸೋಷಿಯಲ್ ಸ್ಪೆಷಲ್ ಕ್ಲಾಸ್ ಇದ್ದಿದ್ದು....ಆ ಪುರಾಣ ಕೇಳೆ ಸಾಕಾಗಿದೆ....ಇನ್ನು ನೀನೂ ಈ ಪತ್ರೋಡೆ ಪುರಾಣ ಹೇಳಬೇಡ...ನಂಗೆ ಕೇಳಕ್ಕೆ ಆಗಲ್ಲ...ಇದು ನಂಗೆ ಬೇಡ..." ಎಂದು ತನ್ನ ಎದುರಿನ ಟೇಬಲ್ ಮೇಲೆ ಇದ್ದ ಪ್ಲೇಟನ್ನು ದೂರ ಸರಿಸಿದನು ಪ್ರದೀಪ್."ಚೂರು ತಿನ್ನೋ ಪುಟ್ಟ...ಅಪ್ಪ ಚೆನ್ನಾಗಿದೆ ಅಂತ ಇನ್ನೊಂದು ಸಲ ಹಾಕೊಂಡು ತಿಂದ್ರು...ಒಂದು ಚೂರು ತಿಂದು ನೋಡು...ಚೆನ್ನಾಗಿಲ್ಲ ಅಂದ್ರೆ ಬಿಡು..ಆಮೇಲೆ ನಿಂಗೆ ಒತ್ತಾಯ ಮಾಡಲ್ಲ..." ಎಂದು ಹೇಳುತ್ತಾ ಟೇಬಲ್ ಮೇಲಿದ್ದ ಪ್ಲೇಟನ್ನು ಕೈಗೆತ್ತಿಕೊಂಡು ಮತ್ತೆ ಮಗನ ಬಳಿಗೆ ತಂದಳು ತುಳಸಿ.
"ನಂಗೆ ಬೇಡಾ......"ಈ ಬಾರಿ ಆತನ ರಾಗ ಜೋರಾಗಿಯೇ ಇತ್ತು."ನಂಗೆ ಇದು ತಿಂದ್ರೆ ಗಂಟಲು ತುರಿಸುತ್ತೆ...." ತಿನ್ನಲು ಮನಸ್ಸಿಲ್ಲದ ಪ್ರದೀಪನಿಗೆ ಹೇಳಲು ತೋಚಿದ್ದು ಅದೊಂದೇ ಕಾರಣ."ಇದು ಒಳ್ಳೆ ಕೆಸು ಮಾರಾಯಾ...ಸರೀ ಹುಣಸೆಹಣ್ಣು ಹಾಕಿದ್ದೀನಿ....ಗಂಟಲು ತುರಿಸಲ್ಲ...ಚೂರು..." "ಅಮ್ಮಾ...ಪ್ಲೀಸ್...ಬೇಡ ಅಂದ್ರೆ ಬೇಡ...." ತಾಯಿ ಮಾತು ಮುಗಿಸುವ ಮುನ್ನವೇ ಖಾರವಾಗಿ ನುಡಿದು ತನ್ನ ರೂಮಿನ ಕಡೆಗೆ ಹೆಜ್ಜೆ ಹಾಕಿದನು ಪ್ರದೀಪ.
"ಹಾಗದರೆ ಬೇರೆ ಏನಾದರು ಮಾಡಿ ಕೊಡ್ಲಾ....ನೀರು ದೋಸೆ ತಿಂತೀಯಾ??" ಎಂದು ಮಮತೆಯಿಂದಲೆ ಕೇಳಿದಳು ತುಳಸಿ.
"ಅಬ್ಬಾ...!!" ಮುಖವನ್ನು ಸಣ್ಣಗೆ ಮಾಡುತ್ತಾ "ಯಾರಿಗೆ ಬೇಕು ಆ ನೀರುದೋಸೆ?!" ಮತ್ತೊಮ್ಮೆ ಬೇಸರದಿಂದ ಹೇಳಿದನು ಪ್ರದೀಪ.
"ಸರಿ ಅವಲಕ್ಕಿ ತಿಂತೀಯಾ??ಬೇಡ ಅಂದ್ರೆ ಚಪಾತಿ ಮಾಡ್ತೇನೆ" ಎಂದು ಎರಡು ಆಯ್ಕೆಗಳನ್ನು ಜೊತೆಯಾಗಿಯೇ ಇಟ್ಟಳು ತುಳಸಿ.
"ಪತ್ರೋಡೆ,ಅವಲಕ್ಕಿ,ಚಪಾತಿ,ದೋಸೆ....ಇದು ಯಾವುದೂ ನಂಗೆ ಬೇಡ...ನಂಗೆ ಇಪ್ಪತ್ತು ರೂಪಾಯಿ ಕೊಡು...ನಾನು ಹೊರಗೆ ಹೋಗಿ ಏನಾದರೂ ತಿಂದು ಬರ್ತೀನಿ" ಎಂದು ಹಣಕ್ಕಾಗಿ ತಾಯಿಯ ಬಳಿ ಬೇಡಿಕೆ ಇಟ್ಟನು.
"ದಿನ ಹೊರಗಿನದ್ದು ತಿಂತೀಯಾ....ಆರೋಗ್ಯಕ್ಕೆ ಒಳ್ಳೆದಲ್ಲಾ ನೋಡು....ಊಟನೂ ಸರಿಯಾಗಿ ಮಾಡಲ್ಲ.."ಎಂದು ಹೇಳುತ್ತಲೇ ಇಪ್ಪತ್ತು ರೂಪಾಯಿಗಳನ್ನು ಮಗನ ಕೈಗೆ ಇಟ್ಟಳು ತುಳಸಿ.ಖುಷಿಯಿಂದ ಹೊರಗೆ ಹೋಗುತ್ತಿದ್ದ ಮಗನನ್ನು ತಡೆದು "ಈ ಹೂವನ್ನ ಹಾಗೆ ಆ ತೋಟದ ಮನೆಯ ಆಂಟಿಗೆ ಕೊಟ್ಟು ಹೋಗು...ಇಲ್ಲದಿದ್ರೆ ನಾನು ಇದಕ್ಕೋಸ್ಕರವೇ ಅವರ ಮನೆಗೆ ಹೋಗಬೇಕು...ಹೋದ್ರೆ ಸುಮಾರು ಹೊತ್ತು ಆಗುತ್ತೆ..." ಎನ್ನುತಿರುವಂತೆಯೇ ಆತ ತಾಯಿಯ ಕೈಯಲ್ಲಿದ್ದ ಹೂವಿನ ಕವರನ್ನು ತೆಗೆದುಕೊಂಡು ಖುಷಿಯಿಂದ ಹೊರಗೆ ಹೋದ.ತನ್ನಿಷ್ಟದ ತಿಂಡಿಯನ್ನು ತಿಂದು ವಾಪಾಸ್ ಬಂದ.
ಮನೆಯವರೆಲ್ಲಾ ಊಟಕ್ಕೆ ಕುಳಿತ್ತಿದ್ದರು.ತುಳಸಿ ಎಲ್ಲರಿಗೂ ಬಡಿಸುತ್ತಿದ್ದಳು.ಅಷ್ಟು ಹೊತ್ತಿಗೆ ಮನೆಯ ಪೋನ್ ರಿಂಗಣಿಸಿತು.
"ಹಲೋ ತುಳಸಿ ನಾನು....ಕೆಸು ಚೆನ್ನಾಗಿರಲಿಲ್ವಾ??" ಆ ಕಡೆಯಿಂದ ಅನಿರೀಕ್ಷಿತವಾಗಿ ಬಂದ ಪ್ರಶ್ನೆಗೆ ತುಳಸಿ ಅವಕ್ಕಾದಳು.
"ಚೆನ್ನಾಗಿತ್ತು...ಹಸಿ ಹಸಿ ಇತ್ತಲ್ಲಾ...ಇವತ್ತು ಪತ್ರೋಡೆ ಮಾಡಿದ್ದೆ...ಇನ್ನು ಸ್ವಲ್ಪ ಇದೆ...ನಾಳೆ ಏನಾದರೂ ಮಾಡ್ತೇನೆ..." ಎಂದು ವಿವರಣೆ ನೀಡಿದಳು.
"ಹೌದಾ..!!ಮತ್ತೆ ನಿಮ್ಮ ಮಗ ಹೇಳಿದ 'ಕೆಸು ಗಂಟಲು ತುರಿಸುತ್ತೆ, ಆದ್ದರಿಂದ ಇನ್ನು ಮೇಲೆ ಕೆಸು ಬೇಡವಂತೆ ಅಂತ ಅಮ್ಮ ಹೇಳಿದಳು' " ಎಂದು ಆ ಕಡೆಯಿಂದ ತೋಟದ ಮನೆಯ ಆಂಟಿಯ ವಿವರಣೆ.
ಈ ಮಾತು ಕೇಳುತ್ತಿದ್ದಂತೆಯೇ ತುಳಸಿಗೆ ಮಗನ ಹುಡುಗಾಟದ ಕೆಲಸದ ಅರಿವಾಯಿತು."ಸುಳ್ಳು ಹೇಳಿದ್ದಾನೆ...ಅವನಿಗೆ ಪತ್ರೋಡೆ ಆಗಲ್ಲ...ಕಳ್ಳ ಹಾಗಾಗಿ ನೀವು ಕೆಸು ಕೊಡದೇ ಬೇಡ ಅಂತಾ ನಿಮ್ಮ ಹತ್ರ ಸುಳ್ಳು ಹೇಳಿದ್ದಾನೆ....ಹಾಗೆನಾದ್ರು ಬೇಡ ಅಂತ ಆಗಿದ್ರೆ ನಾನೇ ನಿಮ್ಮ ಹತ್ರ ಹೇಳ್ತಾ ಇದ್ದೆ..." ಎಂದು ತುಳಸಿ ಸ್ಪಷ್ಟನೆ ನೀಡಿದಳು.
"ಅದೇ ಅಂದುಕೊಂಡೆ...ಊಟ ಆಯ್ತಾ ತುಳಸಿ" ಎಂದು ಮತ್ತೆ ಸ್ನೇಹಿತೆಯರ ಹರಟೆ ಪೋನಿನಲ್ಲಿಯೇ ಪ್ರಾರಂಭವಾಯಿತು.
"ಅಮ್ಮ....ಉಪ್ಪಿನಕಾಯಿ..." ಎಂದು ಡೈನಿಂಗ್ ಹಾಲ್‍ನಿಂದ ಬಂದ ದನಿ ಸ್ನೇಹಿತೆಯರ ಹರಟೆಗೆ ತಡೆಯಾಯಿತು.ಮನಸ್ಸಿಲ್ಲದ ಮನಸ್ಸಿನಿಂದ ಸಂಭಾಷಣೆಯನ್ನು ಮೊಟಕುಗೊಳಿಸಿ ಉಪ್ಪಿನಕಾಯಿ ಬಡಿಸಲು ಮಗನ ಕಡೆಗೆ ಬಂದಳು ತುಳಸಿ.
"ಏಯ್ ಮಂಗ...ಆ ಆಂಟಿ ಹತ್ರ 'ಇನ್ನು ಮೇಲೆ ಕೆಸು ಬೇಡ ಅಂತ ಅಮ್ಮ ಹೇಳಿದಳೆ' ಅಂತ ಹೇಳಿದ್ದೀಯಾ " ಎಂದಾಗ ಪ್ರದೀಪ ತಲೆಬಗ್ಗಿಸಿ ನಗಲಾರಂಭಿಸಿದನು."ಬರಿ ತರ್ಲೆ ಕೆಲಸನೇ ಮಾಡದು...ಇನ್ನು ಮೇಲೆ ಪತ್ರೋಡೆ ಮಾಡಲ್ಲ...ಮಾಡಿದ್ರು ನಿಂಗೆ 'ಬೇಕಾ..??' ಅಂತ ಸಹ ಕೇಳಲ್ಲ..." ಎಂದು "ಸಾಕಾ...ಉಪ್ಪಿನಕಾಯಿ.." ಎನ್ನುತ್ತಾ ಉಪ್ಪಿನಕಾಯಿಯನ್ನು ಮಗನ ತಟ್ಟೆಗೆ ಹಾಕಿದಳು ತುಳಸಿ.
ಅಬ್ಬಾ ಪತ್ರೋಡೆ ರಗಳೆ ತಪ್ಪಿತಲ್ಲಾ ಎಂದು ನಿಟ್ಟುಸಿರು ಬಿಟ್ಟನು ಪ್ರದೀಪ.
*********************************************************************************************************
ಕೆಲಸ ಸಿಕ್ಕಿದ ಮೂರೇ ವರ್ಷಗಳಲ್ಲಿ ಪ್ರದೀಪನಿಗೆ ವಿದೇಶ ಯೋಗ ಪ್ರಾಪ್ತವಾಗಿತ್ತು.ಆತನನ್ನು ಕ್ಯಾಂಪಸ್ ಇಂಟರ್‍ವ್ಯೂನಲ್ಲಿ ಆಯ್ಕೆ ಮಾಡಿಕೊಂಡ ಕಂಪನಿ,ಮೂರೇ ವರ್ಷಗಳಲ್ಲಿ ಆತನ ಸಂಬಳದಲ್ಲಿ ಬಾರಿ ಜಿಗಿತವನ್ನು ನೀಡಿ,ಆತನನ್ನು ಅಮೆರಿಕೆಯ ತನ್ನ ಬ್ರಾಂಚ್‍ಗೆ ಕಳುಹಿಸಿತ್ತು.ಈಗ ಆತನ ಸಂಬಳ ಅದೆಷ್ಟೋ ಡಾಲರ್‍ಗಳು.ಮೊದಲಿಂದಲೂ ವಿದೇಶದ ಬಗ್ಗೆ ಸ್ವಲ್ಪ ಹೆಚ್ಚಿನ ವ್ಯಾಮೋಹವೇ ಇದ್ದದ್ದರಿಂದ ಪ್ರದೀಪನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು.
ಅಂದು ಅದೇಕೋ ಪ್ರದೀಪನಿಗೆ ಪತ್ರೋಡೆ ತಿನ್ನಬೇಕು ಎಂದು ಬಹಳ ಆಸೆ ಆಯಿತು.ಬಾಲ್ಯದಲ್ಲಿ ಪತ್ರೋಡೆ ಎಂದರೆ ಮೂಗು ಮುರಿಯುತ್ತಿದ್ದ ಆತನಿಗೆ ತನ್ನ ಮನೆಯಿಂದ ಸಾವಿರಾರು ಮೈಲಿ ಬಂದ ಮೇಲೆ ಅದೇಕೆ ಆ ಆಸೆ ಬಂದಿತು ಎಂದರೆ ಆತನಿಗೆ ಉತ್ತರ ಗೊತ್ತಿಲ್ಲ.ಆತ ಪತ್ರೋಡೆ ಸಿಗುವ ಹೋಟೆಲ್‍ಗಾಗಿ ಆನ್‍ಲೈನ್‍ನಲ್ಲಿ ಹುಡುಕಲು ಪ್ರಾರಂಭಿಸಿದ.ಎಷ್ಟು ಹುಡುಕಿದರೂ ಆತನಿಗೆ ತನ್ನ ಊರಿನ ಪತ್ರೋಡೆ ಸಿಗುವ ಹೋಟೆಲ್ ಸಿಗಲಿಲ್ಲ.
ಕ್ಷಣಾರ್ಧದಲ್ಲಿ ತಮಗೆ ಬೇಕಾದನ್ನು ಆರ್ಡರ್ ಮಾಡಿ,ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಥವಾ ಒಂದೆರಡು ದಿನಗಳಲ್ಲಿ ಮನೆ ಬಾಗಿಲಿಗೆ ವಸ್ತುಗಳು  ಬರುವ ಈ ಕ್ಷಿಪ್ರಯುಗದಲ್ಲಿ ತಾನು ಬಯಸುತ್ತಿರುವ ಪತ್ರೋಡೆ ಸಿಗುತಿಲ್ಲವಲ್ಲ ಎಂದು ಪ್ರದೀಪನಿಗೆ ತುಂಬಾ ಬೇಸರವಾಯಿತು.ಹಾಗೆ ನೋಡಿದರೆ,ಆನ್‍ಲೈನ್‍ನಲ್ಲಿ ಸಿಗುವ ಹಲಾವಾರು ದುಬಾರಿ ವಸ್ತುಗಳಿಗೆ ಹೋಲಿಸಿದರೆ ಪತ್ರೋಡೆ ಒಂದು ಲೆಕ್ಕವೇ ಅಲ್ಲ.ಆದರೂ ಅದು ಸಿಗುತ್ತಿಲ್ಲ ಎಂದಾಗ ಅದು ಆತನಿಗೆ ನುಂಗಲಾರದ ತುತ್ತಾಯಿತು.ಅಮ್ಮನನ್ನು ಕೇಳಿದ್ದರೆ ಅದೆಷ್ಟು ಬೇಗ ಮಾಡಿಕೊಡುತಿದ್ದಳೋ ಎಂದುಕೊಳ್ಳುತ್ತಾ ತನ್ನ ಹುಡುಕಾಟ ಮುಂದುವರೆಸಿದ.ಆದರೂ ಆತನಿಗೆ ತನ್ನ ಇಷ್ಟದ ಪತ್ರೋಡೆ ದೊರೆಯಲೇ ಇಲ್ಲ.
ತನಗಿಂತಾ ಮೊದಲೇ ವಿದೇಶಕ್ಕೆ ಬಂದು ನೆಲೆಸಿದ್ದ ತನ್ನ ಕೆಲವು ಸ್ನೇಹಿತರಲ್ಲಿಯೂ ತನ್ನ ಪತ್ರೋಡೆಯ ಬಯಕೆಯನ್ನು ತಿಳಿಸಿದನು ಪ್ರದೀಪ.
"ಅಲ್ಲಾ ಲೇ ಪ್ರದೀಪ...ಇಲ್ಲಿ ನಮಗೆ ನಮ್ಮ ದೇಶದ ಊಟ ಸಿಕ್ಕೋದೆ ಕಷ್ಟ...ಇನ್ನು ಪತ್ರೋಡೆ ಕೇಳ್ತಾ ಇದ್ದೀಯಲ್ಲಾ....ಇಲ್ಲಿ ಅದೆಲ್ಲಾ ಸಿಗಲ್ವೋ...ಸಿಕ್ಕಿದರೂ ನಿನ್ನ ಅಮ್ಮ ಮಾಡುವಷ್ಟು ರುಚಿಯಾಗಿಯಂತು ಇರಲ್ಲಾ..." ಎಂದು ಒಬ್ಬ ಹೇಳಿದರೆ, "ಹೋಗಿ ಬರ್ಗರ್ ಶಾಪಲ್ಲಿ ಬರ್ಗರ್ ತಿನ್ನು...ಅದರ ಮಧ್ಯೆ ಎಲೆ ಇಟ್ಟಿರ್ತಾರಲ್ಲಾ...ಅದನ್ನೇ ಕೆಸು ಎಲೆ ಅಂದುಕೋ...ಪತ್ರೋಡೆ ಅಂದುಕೊಂಡು ಕಣ್ಣು ಮುಚ್ಚಿಕ್ಕೊಂಡು ಅದನ್ನೇ ಪತ್ರೋಡೆ ಅಂದುಕೊಂಡು ತಿಂದುಬಿಡು..." ಎಂದು ತಮಾಷೆ ಮಾಡಿ ನಕ್ಕವನು ಇನ್ನೊಬ್ಬ."ಇಲ್ಲಾ ಅಂದ್ರೆ ಇನ್ನೊಂದು ಎಂಟು ತಿಂಗಳು ಕಾಯಬೇಕು...ಹೇಗಿದ್ರು ಅಷ್ಟು ಹೊತ್ತಿಗೆ ಡಿಸೆಂಬರ್ ಬರುತ್ತೆ...ಆಗ ಹೇಗಿದ್ರು ನೀನು ಊರಿಗೆ ಹೋಗ್ತಿಯಲ್ಲಾ...ಆಗ ನಿನ್ನ ಅಮ್ಮನ ಕೈಯಲ್ಲಿ ಪತ್ರೋಡೆ ಮಾಡಿಸಿಕೊಂಡು ತಿನ್ನು..." ಎಂದು ಮತ್ತೊಬ್ಬ ಹೇಳಿದ.
ಪ್ರದೀಪನಿಗೆ ತನ್ನ ಹಿರಿಯ ಸ್ನೇಹಿತರೆಲ್ಲರೂ ಹೇಳಿದ ಮಾತು ಬೇಸರ ತರಿಸಿತು.ಎಷ್ಟೋ ಜನರ ಕನಸಿನ ದೇಶದಲ್ಲಿ ತಾನಿದ್ದರೂ,ಅಲ್ಲದೇ ತಂತ್ರಜ್ಞಾನದ ಉಪಯೋಗವನ್ನು ಯಥೇಚ್ಚವಾಗಿ ಮಾಡಿಕೊಂಡಿದ್ದ ತಾನಿದ್ದ ದೇಶದಲ್ಲಿ ತನ್ನೂರಿನ ಒಂದು ತಿಂಡಿ ಸಿಗುವುದಿಲ್ಲವಲ್ಲಾ ಎನ್ನುವುದೇ ಆತನಿಗೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿತ್ತು.ಆತನ ಆ ಕ್ಷಣದ ಧ್ಯೇಯ ಹೇಗಾದರೂ ಮಾಡಿ ಪತ್ರೋಡೆ ತಿನ್ನುವುದಾಗಿತ್ತು.ಹಾಗೂ ಹೀಗೂ ಮಾಡಿ ಪತ್ರೋಡೆ ಸಿಗುವ ಹೋಟೆಲ್ ಒಂದನ್ನು ಗೊತ್ತುಮಾಡಿದನು ಪ್ರದೀಪ.
ಪತ್ರೋಡೆ ತಿನ್ನಲೆಂದೇ ತಾನಿದ್ದ ಸ್ಥಳದಿಂದ ಸುಮಾರು ಎರಡು ತಾಸಿನ ಪ್ರಯಾಣ ನೆಡೆಸಿದ್ದ ಪ್ರದೀಪ.ದಾರಿಯುದ್ದಕ್ಕೂ ಆತನಿಗೆ ಪತ್ರೋಡೆಯ ನೆನಪು.ಅಲ್ಲೇ ಒಂದಿಷ್ಟು ತಿಂದು,ಮತ್ತೊಂದಷ್ಟನ್ನು ಕಟ್ಟಿಸಿಕೊಂಡು ಮನೆಗೆ ತಂದು ಪ್ರಿಡ್ಜನಲ್ಲಿ ಇಟ್ಟು,ಬೇಕುಬೇಕೆನಿಸಿದಾಗ ಒವೆನ್‍ನಲ್ಲಿ ಬಿಸಿ ಮಾಡಿ ಒಂದೆರಡು ದಿನ ತಿನ್ನಬಹುದು ಎಂದೆಲ್ಲಾ ಯೋಚಿಸುತ್ತಿದ್ದ ಪ್ರದೀಪ.ಅಂತೂ ಇಂತೂ ತಾನು ಕಾಯುತ್ತಿದ್ದ ಹೋಟೆಲ್ ಬಂದೇ ಬಿಟ್ಟಿತು.
"ಒನ್ ಪ್ಲೇಟ್ ಪತ್ರೋಡೆ...." ಎಂದು ಆರ್ಡರ್ ಹೇಳಿ ಅಲ್ಲದೇ "ಹೌ ಮಚ್ ಟೈಮ್ ಇಟ್ ವಿಲ್ ಟೇಕ್.." ಎಂದೂ ಕೇಳಿದ್ದ.ತಾನು ಆರ್ಡರ್ ಮಾಡಿದ್ದ ಹತ್ತು ನಿಮಿಷಗಳಲ್ಲಿ ತಾನು ಬಯಸಿದ್ದ ಪತ್ರೋಡೆ ತನ್ನೆದುರೇ ಇದ್ದದ್ದನ್ನು ಕಂಡು ಪ್ರದೀಪನಿಗೆ ತುಂಬಾ ಖುಷಿಯಾಯಿತು.ಆದರೆ ಅದು ನೋಡಲು ಸಾಮಾನ್ಯವಾಗಿ ಮಾಡುವ ಪತ್ರೋಡೆಯಂತೆ ಕಾಣಲಿಲ್ಲ.ಆದರೂ ತನ್ನ ಆಸೆ ತೀರಿತಲ್ಲಾ ಎಂದುಕೊಳ್ಳುತ್ತಾ ತುತ್ತೊಂದನ್ನು ಬಾಯಿಗೆ ಇಟ್ಟನು.
ತನ್ನ ಅಮ್ಮನ ನೆನಪು ಹಾಗೆಯೇ ಆಕೆ ತನ್ನ ಪ್ರೀತಿಯನ್ನು ಸೇರಿಸಿ ಮಾಡುತ್ತಿದ್ದ ಪತ್ರೋಡೆಯ ನೆನಪಾಗಿ,ಆತನಿಗೆ ಅದೇಕೋ ಇನ್ನೊಂದು ತುತ್ತನ್ನು ಬಾಯಿಗಿಡಲು ಮನಸ್ಸಾಗಲೇ ಇಲ್ಲ.

Wednesday 2 March 2016

ಪುಂಗವ

ಪುಂಗವ
ಐದು ವರ್ಷಗಳ ಕೆಳಗೆ ಹೇಗಿತ್ತೋ ಈಗಲೂ ಹಾಗೆ ಇದ್ದ ತನ್ನ ಊರನ್ನು ಕಂಡು ವಿಶ್ವೇಶ್‍ಗೆ ಅದೇನೋ ಸಂತೋಷ.ಕಾಂಕ್ರೀಟಿಕರಣದ ಜಂಜಾಟಕ್ಕೆ ಬಲಿಬೀಳದೆ ಇನ್ನೂ ತನ್ನ ಸ್ವಂತಿಕೆಯನ್ನು ಇಟ್ಟುಕೊಂಡಿದ್ದ ಕೆಲವೇ ಊರುಗಳಲ್ಲಿ ವಿಶ್ವೇಶ್‍ನ ಊರು ಒಂದಾಗಿತ್ತು.ಅದೇ ತೆಂಗು,ಅಡಿಕೆಯ ತೋಟ.ಅಲ್ಲಲ್ಲಿ ಕಾಣುವ ಬಾಳೆಯ ಗಿಡಗಳು.ಮೊಬೈಲ್ ಟವರ್‍ಗಳ ಆಕ್ರಮಣಕ್ಕೆ ಸಿಲುಕದೆ ಇನ್ನೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿರುವ ಗುಬ್ಬಚ್ಚಿಗಳು.ಅವುಗಳ ಆಶ್ರಯಕ್ಕೆ ನೆರವಾಗಿರುವ ಹಂಚಿನ ಮನೆಗಳು.ಹೀಗೆ ನಗರದ ಬದುಕಿನಲ್ಲಿ ಕಳೆದು ಹೋಗಿದ್ದ ವಿಶ್ವೇಶ್‍ಗೆ ಬೇರೆಯ ಪ್ರಪಂಚಕ್ಕೆ ಕಾಲಿಟ್ಟಂತೆಯೇ ಆಯಿತು.
ವಿಶ್ವೇಶ್‍ನ ನಿಜವಾದ ಹೆಸರು ವಿಶ್ವನಾಥ,ಆದರೆ ಇಂಜಿನಿಯರಿಂಗ್ ಮಾಡಿ ಕರ್ಪೋರೇಟ್ ಜಗತ್ತಿಗೆ ಕಾಲಿಟ್ಟ ವಿಶ್ವನಾಥನಿಗೆ ಜಗತ್ತೇ ಗೆದ್ದ ಅನುಭವ.ಹಾವ-ಭಾವ,ವೇಷ,ಭಾಷೆ ಎಲ್ಲಾ ಬದಲಾಯಿತು.ಅದಕ್ಕೆ ವಿಶ್ವನಾಥ ತನ್ನ ಹೆಸರನ್ನು ವಿಶ್ವೇಶ್ ಎಂದು ಬದಲಿಸಿಕೊಂಡಿದ್ದ.ಬೆಂಗಳೂರಿಗೆ ಹೋದ ಮೇಲಂತೂ ಅವನು ಊರಿಗೆ ಬರುವುದೇ ಅಪರೂಪವಾಗಿತ್ತು.ಕಾಂಕ್ರೀಟ್ ಕಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅವನಿಗೆ ತನ್ನ ಊರನ್ನು ಒಮ್ಮೆ ಭೇಟಿ ಮಾಡಲು ಸುಮಾರು ಎಂಟು ವರ್ಷಗಳು ಬೇಕಾಯಿತು.ಅದಕ್ಕಾಗಿಯೇ ಹಸಿರ ಕಾಡು ಅವನಿಗೆ ಸ್ವರ್ಗದ ಅನುಭವ ನೀಡಿತು.
ಊರಿನ ಬೀದಿಗಳಲ್ಲಿ ಹೋಗುವಾಗ,ಹಳೆಯ ನೆನಪುಗಳು ಆತನ ಮೆದುಳಿನಲ್ಲಿ ಪ್ರವಹಿಸತೊಡಗಿದವು.ತಾನು ಓಡಾಡುತ್ತಿದ್ದ ಬೀದಿಗಳು,ತಾನು ಕಲಿತ ಶಾಲೆ ಹೀಗೆ ಒಂದೊಂದೆ ನೆನಪುಗಳು ತಲೆಯಲ್ಲಿ ಚಲಿಸತೊಡಗಿದವು.ಆತನ ಮೂವತ್ತು ಲಕ್ಷದ ಕಾರು ಮಾತ್ರ ಆ ಊರಿನ ಅರೆಕಾಂಕ್ರೀಟಿನ ರಸ್ತೆಗೆ ಅಷ್ಟಾಗಿ ಒಗ್ಗಿಕೊಳ್ಳಲಿಲ್ಲ.ಒಂದಷ್ಟು ಊರು ಸುತ್ತಿದ ಮೇಲೆ ಕಾರನ್ನು ಮನೆಯೊಂದರ ಮುಂದೆ ನಿಲ್ಲಿಸಿ ಕಾರಿನಿಂದ ಇಳಿದ.
"ಚಿದಾನಂದ....ಚಿದಾನಂದ...." ಹೆಸರು ಕೂಗುತ್ತಾ ತೆರೆದ ಬಾಗಿಲ ಒಳಗೆ ಹೋದ ವಿಶ್ವೇಶ್."ಯಾರು?" ಹೆಂಗಸೊಬ್ಬಳು ತನ್ನ ಕೈಯನ್ನು ಸೀರೆಗೆ ಒರೆಸಿಕೊಳ್ಳುತ್ತಾ ಬಂದಳು.
"ಚಿದಾನಂದ ಇಲ್ವಾ??ನಾನು ವಿಶ್ವೇಶ್ ಸಾರಿ ವಿಶ್ವನಾಥ ಅಂತಾ ಅವನ ಸ್ನೇಹಿತ..." ವಿಶ್ವೇಶ್ ಹೇಳಿದ.
"ನಮಸ್ಕಾರ...ಅವ್ರು ಇಲ್ಲ ತೋಟಕ್ಕೆ ಹೋಗಿದ್ದಾರೆ....ನೀವು ಕೂತುಕೊಳ್ಳಿ.." ಎಂದು ಸೋಫಾದತ್ತಾ ಬೆರಳು ಮಾಡಿ ತೋರಿಸಿದಳು."ಬಾಯಾರಿಕೆಗೆ ಏನು ಮಾಡ್ಲಿ?ಶರಬತ್ತಾ...??ಮಜ್ಜಿಗೆಯಾ...??" ಎಂದು ಮುಂದುವರೆಸಿದಳು."ಪರವಾಗಿಲ್ಲ...ಏನು ಬೇಡ.." ಎಂದ ವಿಶ್ವೇಶ್.
"ಸ್ವಲ್ಪ ಮಜ್ಜಿಗೆ ತರ್ತೀನಿ....ಬಿಸಿಲಿನ ದಣಿವು ಆರುತ್ತೆ..." ಎಂದು ಹೇಳುತ್ತಾ ಉತ್ತರಕ್ಕೆ ಕಾಯದೆ ಅಡುಗೆ ಮನೆಯ ಕಡೆಗೆ ಓಡಿದಳು.ವಿಶ್ವೇಶ್ ಸುತ್ತಲೂ ನೋಡಿದ.ಹಳೆಯ ಮನೆ.ಜಾಗಕ್ಕೆ ಬರವಿಲ್ಲದಷ್ಟು ವಿಶಾಲ.ದೊಡ್ಡ ದೊಡ್ಡ ಕಂಬಗಳು.ಅದಾಗಲೇ ಆತನ ನಗರದ ಒಂದು ಕೋಟಿಯ ಪ್ಲಾಟ್ ಆ ಮನೆಯ ಎದುರು ನಗಣ್ಯವಾದಂತೆ ಕಂಡಿತು.
"ತೊಗೊಳ್ಳಿ....ಅವರು ಇನ್ನೇನು ಬರಬಹುದು....ಹೇಳಿ ಕಳುಹಿಸಿದ್ದೀನಿ...." ಎಂದು ದೊಡ್ಡ ಸ್ಟೀಲ್ ಲೋಟವನ್ನು ವಿಶ್ವೇಶ್‍ಗೆ ಕೊಟ್ಟಳು ಅನಸೂಯ.ತಣ್ಣಗಿನ ಮಜ್ಜಿಗೆಯನ್ನು ಹೀರುತ್ತಾ ವಿಶ್ವೇಶ್ ಕೇಳಿದ "ತಾವು..??" "ನಾನು ಅನಸೂಯ....ಚಿದಾನಂದ ಅವರ ಹೆಂಡತಿ..." ಎಂದಳು.
"ಮದುವೆಯಲ್ಲಿ ನೋಡಿದ್ದು...ಹಾಗಾಗಿ ಮುಖ ಅಷ್ಟು ನೆನಪಿಲ್ಲ...." ಎನ್ನುವಾಗಲೇ "ವಿಶ್ವ...ವಿಶ್ವನಾಥ..." ಬಾಗಿಲಿನಿಂದ ದನಿಯೊಂದು ಕೇಳಿತು.
"ಹಾಯ್...ಚಿದಾನಂದ...ಹೇಗಿದ್ದೀಯಾ??" ಬಹು ವರ್ಷಗಳ ನಂತರ ಸಿಕ್ಕಿದ ಸ್ನೇಹಿತರು ಆಲಿಂಗಿಸಿಕೊಂಡರು."ನಾನು ಆರಾಮಿದ್ದೀನಿ...ನೀನು??" ಎಂದು ಪ್ರಶ್ನೆಯೊಂದಿಗೆ ಉತ್ತರ ಸೇರಿಸಿ ಕೇಳಿದ ವಿಶ್ವೇಶ್.ಹೀಗೆ ಉಭಯಕಶಲೋಪರಿಯ ಒಂದಷ್ಟು ಮಾತುಗಳ ನಂತರ "ಸರಿ...ಎಷ್ಟು ಜನ ಮಕ್ಕಳು ನಿಂಗೆ??" ವಿಶ್ವೇಶ್‍ನ ಪ್ರಶ್ನೆ.
"ಇಬ್ಬರು...ಒಂದು ಹೆಣ್ಣು...ಒಂದು ಗಂಡು...ನಿನಗೆ?" ಎಂದು ಪ್ರಶ್ನೆ ಇಟ್ಟ ಚಿದಾನಂದ."ಒಬ್ಬ ಮಗ...ಅಂಕುಶ್..." ಎಂದು ಹೇಳುವಾಗಲೇ,"ಅಪ್ಪಾ...
ಎಷ್ಟು ಹೊತ್ತಿಗೆ ಹೊರಡೋದು ಅಂತಾ ಅಮ್ಮ ಕೇಳ್ತಾ ಇದ್ದಾಳೆ..." ಎನ್ನುತ್ತಾ ಬಂದಳು ಸೌಪರ್ಣಿಕ."ಪುಟ್ಟಿ..ಬಾ ಇಲ್ಲಿ..ಈ ಮಾವನ ಹೆಸರು ವಿಶ್ವನಾಥ...ನನ್ನ ಗೆಳೆಯ..." ಎಂದು ಮಗಳಿಗೆ ಹೇಳುತ್ತಾ "ಇವಳು ನನ್ನ ಮಗಳು ಸೌಪರ್ಣಿಕ"ಎಂದು ವಿಶ್ವೇಶ್‍ಗೆ ತನ್ನ ಮಗಳನ್ನು ಪರಿಚಯಿಸಿದನು ಚಿದಾನಂದ.
"ಬಾಳೆಹಣ್ಣು ನಾಲ್ಕು ಗೊನೆ ತಂದು ಹೊರಗೆ ಇಟ್ಟಿದ್ದಾರೆ...ಹೊರಡುವಾಗ ಕಾರಿಗೆ ಹಾಕಿದರೆ ಸಾಕಲ್ಲ ಅಪ್ಪಾ.." ಎಂದು ಮಗ ಆತ್ರೇಯ ಚಿದಾನಂದನನ್ನು ಕೇಳಿದ."ಹಾ!!ಸಾಕು..." ಎಂದು ಹೇಳುತ್ತಾ "ಇವನು ನನ್ನ ಕೀರುತಿಗೆ....ಆತ್ರೇಯ..." ಎಂದು ಹೇಳುತ್ತಾ "ಇವನು ನನ್ನ ಸ್ನೇಹಿತ...ವಿಶ್ವನಾಥ" ಎಂದು ಪರಸ್ವರ ಪರಿಚಯಿಸಿದನು ಚಿದಾನಂದ.
  ಮಾತುಗಳ ನಡುವೆ ಪೋನ್ ರಿಂಗಣಿಸಿತು."ಎಕ್ಸಕ್ಯೂಸ್ ಮಿ.." ಎನ್ನುತ್ತಾ ವಿಶ್ವೇಶ್ ಇನ್ನ ಕಿಸೆಯಿಂದ ಅರವತ್ತು ಸಾವಿರದ ಸ್ಮಾರ್ಟ್‍ಪೋನ್ ತೆಗೆದು ಮಾತನಾಡಲಾರಂಭಿಸಿದನು.
"ನೋ...ನೋ...ಆಗಲ್ಲ...ಒಂದುವರೆ ಕೋಟಿ ಕಮ್ಮಿ ಒಂದು ರೂಪಾಯಿನೂ ಆಗಲ್ಲ....ಐ ಯಾಮ್ ಸಾರಿ..." ಎನ್ನುತ್ತಾ ತನ್ನ ಕರೆಯನ್ನು ಕಟ್ ಮಾಡಿ ಪೋನನ್ನು ಮತ್ತೆ ತನ್ನ ಕಿಸೆಯಲ್ಲಿ ಇಟ್ಟುಕೊಂಡನು.
"ಆಗಲ್ಲ ಅಂತ ಹೇಳಿದ್ರು..ಮತ್ತೆ ಮತ್ತೆ ತಲೆ ತಿಂತಾರೆ..." ಎಂದು ಗೊಣಗಿದ ವಿಶ್ವೇಶ್. "ಏನಾಯ್ತು??ಏನಾದರು ಸಮಸ್ಯೆನಾ??" ಎಂದು ಚಿದಾನಂದ ವಿಶ್ವೇಶ್‍ನ ಗೊಣಗಾಟದ ಕಾರಣಕ್ಕಾಗಿ ಪ್ರಶ್ನಿಸಿದ.
"ಏನಿಲ್ಲಾ...ನಾನು ಊರಿಗೆ ಬಂದಿದ್ದೆ ನಮ್ಮ ಆಸ್ತಿಯನ್ನೆಲ್ಲಾ ಮಾರಿ ಹೋಗಲಿಕ್ಕೆ.....ಸುಮಾರು ಒಂದೂವರೆ ಕೋಟಿ ಬೆಲೆಬಾಳೋ ಆಸ್ತಿ....ಅದನ್ನ ಕಡಿಮೆಗೆ ಕೊಡಿ ಅಂತಾ ಕೇಳ್ತಾರೆ....." ವಿಶ್ವೇಶ್ ತನ್ನ ಸಿಟ್ಟಿನ ಕಾರಣ ವಿವರಿಸಿದ.
"ಏನು ಊರಿನ ಆಸ್ತಿಯೆಲ್ಲಾ ಮಾರ್ತೀಯಾ...??" ಎಂದು ಚಿದಾನಂದ ಆಶ್ಚರ್ಯದಿಂದ ಕೇಳಿದ.
"ಹೌದು...ನನಗಂತೂ ಬೆಂಗಳೂರಲ್ಲಿ ಒಂದು ವಿಲ್ಲಾ ಇದೆ....ತಿಂಗಳಿಗೆ ಮೂರು ಲಕ್ಷ ಸಂಬಳ....ನನ್ನ ಮುಂದಿನ ಜೀವನವನ್ನು ಅಲ್ಲೇ ಕಳೆಯೋಣ ಅಂತಾ....ಈಗ ಊರಿಗೆ ಬಂದು ಇರೋದು ಅಂದ್ರೆ ಸ್ವಲ್ಪ ಕಷ್ಟ...ಅದಕ್ಕೆ ಊರಿನ ಆಸ್ತಿ ಮಾರಿ ಆರಾಮಾಗಿ ಇರೋಣ ಅಂತಾ...." ಎಂದು ತನ್ನ ನಿರ್ಧಾರವನ್ನು ಬಲಪಡಿಸಿಕೊಂಡೆ ಹೇಳಿದ ವಿಶ್ವೇಶ್.
"ಓ...ಹಾಗಾ...." ಚಿದಾನಂದ ಹೀಗೆನ್ನುವಾಗ."ರೀ...ಅಡಿಗೆ ರೆಡಿ....ಹೊರಡೋಣ ಅಂದರೆ ನಾನು ಬೇಗ ರೆಡಿ ಆಗ್ತೀನಿ.." ಎಂದು ಅನಸೂಯಳ ಸ್ವರ ಬಂದಿತು."ಸರಿ ಬೇಗ ಹೊರಡು....ಈಗ ಹೊರಟರೆ ಸರಿ ಆಗುತ್ತೆ..." ಎಂದ ಚಿದಾನಂದ.
"ಏನೋ ಕುಟುಂಬ ಸಮೇತ ಎಲ್ಲೋ ಹೊರಟ ಹಾಗೆ ಇದೆ....ಏನು ಔಟಿಂಗಾ??" ಎಂದು ವಿಶ್ವೇಶ್ ಕೇಳಿದ.
"ಇಲ್ಲಾ ಇಲ್ಲಾ ಹಾಗೇನು ಅಲ್ಲ...ಇವತ್ತು ನಮ್ಮ ಪುಟ್ಟಿ ಬರ್ತಡೇ...ಹಾಗಾಗಿ..."ಮಾತು ಮುಗಿಸುವ ಮುನ್ನವೇ "ಓಹ!ನೈಸ್...ಹ್ಯಾಪಿ ಬರ್ತ್‍ಡೇ ಸೌಪರ್ಣಿಕ..." ಎನ್ನುತ್ತಾ ಆ ಪುಟ್ಟ ಹುಡುಗಿಯ ಪುಟ್ಟ ಕೈ ಕುಲುಕುತ್ತಾ ಚೀರಿದನು ವಿಶ್ವೇಶ್. "ಎಷ್ಟು ವರ್ಷ ಪುಟ್ಟಿ..??" ಎಂದಾಗ "ಒಂಭತ್ತು.." ಎಂದಳು ಸೌಪರ್ಣಿಕ.
ಜೇಬಿನಿಂದ ತನ್ನ ಪರ್ಸನ್ನು ತೆಗೆದು ಸಾವಿರದ ಒಂದಷ್ಟು ನೋಟುಗಳನ್ನು ಆ ಹುಡುಗಿಯ ಕೈಯಲ್ಲಿ ಇಟ್ಟು "ಏನು ಬೇಕೋ ಅದು ತೊಗೋ" ಎಂದನು ವಿಶ್ವೇಶ್.
"ಗಿಪ್ಟ್ ನೀನು ಕೊಟ್ಟಿದ್ದೀಯಾ....ಪಾರ್ಟಿ ನಾವು ಕೊಡಿಸ್ತೀವಿ....ಇವತ್ತು ನಮ್ಮೆಲ್ಲರ ಊಟ ಹೊರಗೆ.." ಎನ್ನುತ್ತಾ ತಾವು ಹೋಗುತ್ತಿದ್ದ ಜಾಗಕ್ಕೆ ಹೃದಯತುಂಬಿ ಆಹ್ವಾನಿಸಿದನು ಚಿದಾನಂದ.
************************************************************************************
ಸುಮಾರು ಆರು ಮೈಲು ಸಾಗಿದರೂ ಇನ್ನು ಬಾರದ ಆ ಜಾಗವನ್ನು ಕಂಡು ವಿಶ್ವೇಶ್‍ಗೆ ಗೊಂದಲವಾಯಿತು.ಅದಾಗಲೇ ಆತ ಚಿದಾನಂದನ ಬಳಿ ಯಾವ ಸ್ಥಳಕ್ಕೆ ತಾವು ಹೋಗುತ್ತಿದ್ದೇವೆ ಎಂದು ಸಾಕಷ್ಟು ಬಾರಿ ಕೇಳಿದ್ದ."ಎಲ್ಲಿಗೆ ಹೋಗ್ತಿದ್ದೀವಿ??ರೆಸಾರ್ಟ್,ಮಾಲ್,ಹೋಟೆಲ್...ಯಾವ ಸ್ಥಳ ಅಂತನಾದ್ರು ಹೇಳು" ಎಂದು ವಿಶ್ವೇಶ್ ಮತ್ತೊಮ್ಮೆ ಕೇಳಿದ."ಇರು ಇನ್ನೇನು ಬಂದೆ ಬಿಟ್ಟಿತು..." ಎಂದು ಮತ್ತೊಮ್ಮೆ ಅದೇ ಉತ್ತರ ನೀಡಿದ ಚಿದಾನಂದ.
"ಬಂದೇ ಬಿಟ್ಟಿತು ನೋಡು..." ಎಂದು ತನ್ನ ಕಾರನ್ನು ನಿಲ್ಲಿಸಿದ ಚಿದಾನಂದ.
ವಿಶ್ವೇಶ್‍ನ ಕಾತರತೆ ಈಗ ಕೊನೆಯಾಗಿತ್ತು.ವಿಶಾಲವಾದ ಬಯಲಿನ ಮಧ್ಯದಲ್ಲಿ ಸುಮಾರು ಮೂರು ಅಂತಸ್ತಿನ ಮಳಿಗೆ.ಅಲ್ಲಲ್ಲಿ ಆಡುತ್ತಿರುವ ಪುಟ್ಟ ಪುಟ್ಟ ಮಕ್ಕಳು.ದೊಡ್ಡದಾದ ಬೋರ್ಡ್ ಒಂದರಲ್ಲಿ ಬರೆದು ಹಾಕಿದ್ದ "ವನಸುಮ" ಎಂಬ ಹೆಸರು ವಿಶ್ವೇಶ್‍ನ ಕಣ್ಣಿಗೆ ಬಿದ್ದಿತು.
    "ಏನೋ ಇದು ಸ್ಕೂಲಾ..??" ಎಂದು ವಿಶ್ವೇಶ್ ಪ್ರಶ್ನೆಯೊಂದನ್ನು ಮುಂದಿಟ್ಟ.
"ಅಲ್ಲವೋ..ಇದೊಂದು ಆಶ್ರಮ....ತಂದೆ-ತಾಯಿಯ ಪ್ರೀತಿ ಕಾಣದ ಮುದ್ದು ಮಕ್ಕಳು ಇಲ್ಲಿ ಬೆಳೀತಾರೆ...ನಾವು ಬರ್ತ್‍ಡೇ ಸೆಲಬ್ರೇಟ್ ಮಾಡದು..ಪಾರ್ಟಿ ಕೊಡಿಸೋದು ಎಲ್ಲಾ ಇಲ್ಲೇ..." ಎಂದು ತಾವು ತಂದಿದ್ದ ಒಂದೊಂದೇ ಸಾಮಾನುಗಳನ್ನು ಇಳಿಸುತ್ತಾ ಹೇಳಿದ ಚಿದಾನಂದ.
ನಗರದಲ್ಲಿ ತನ್ನ ಪ್ರತಿಷ್ಠಗೆ ಸರಿಹೊಂದುವರನ್ನು ಮಾತ್ರ ಕರದು,ಐಷಾರಾಮಿ ಜಾಗಗಳಲ್ಲಿ ಲೆಕ್ಕವಿಲ್ಲದಷ್ಟು ಹಣ ಚೆಲ್ಲುವುದನ್ನೇ ಆನಂದ,ಸಂತೋಷ ಎಂದು ಭಾವಿಸಿದ್ದ ವಿಶ್ವೇಶ್‍ನಿಗೆ ಏನೋ ಒಂದು ರೀತಿಯ ಆಶ್ಚರ್ಯ,ಜೊತೆಗೆ ತಳಮಳ.ಏನೂ ತೋಚದವನಂತಾಗಿ ಹಾಗೆ ನಿಂತುಬಿಟ್ಟ.
"ಅಪ್ಪಾ...ಇದು ತೊಗೋ ಅಂಕಲ್ ಕೊಟ್ಟ ದುಡ್ಡು....ಈ ಬರ್ತ್‍ಡೇ ಗೆ ನನ್ನ ಕಡೆಯಿಂದ ವನಸುಮಕ್ಕೆ..." ಎಂದು ಸೌಪರ್ಣಿಕ ಅಪ್ಪನಿಗೆ ವಿಶ್ವೇಶ್ ಕೊಟ್ಟ ಸಾವಿರದ ನೋಟುಗಳನ್ನು ಕೊಟ್ಟಳು.ಇದು ವಿಶ್ವೇಶ್‍ನಿಗೆ ಮತ್ತೊಂದು ಆಶ್ಚರ್ಯದ ಸಂಗತಿ.
ತನ್ನ ಮಗ ಯಾರಾದರು ನೀಡಿದ ಹಣವನ್ನು ಸ್ವಲ್ಪವೂ ಲೆಕ್ಕಿಸದೆ ತನಗೆ ಬೇಕು ಬೇಕಾದನ್ನು ಮನಬಂದಂತೆ ತೆಗೆದುಕೊಳ್ಳುತ್ತಿದ್ದ ತನ್ನ ಮಗನಿಗೂ ಈ ಹುಡುಗಿಗೂ ಅದೆಷ್ಟು ವ್ಯತ್ಯಾಸ.ಹಾಗೆ ನೋಡಿದರೆ ತನ್ನ ಮಗನೇ ಈಕೆಗಿಂತ ಎರಡು-ಮೂರು ವರ್ಷ ದೊಡ್ಡವನು.ಅದೇಕೆ ತನ್ನ ಮಗನಲ್ಲಿ ತಾನು ಇಂತಾ ದೊಡ್ಡ ಗುಣವನ್ನು ಕಾಣಲಿಲ್ಲ ಎಂದುಕೊಂಡು,ಅದು ಸರಿ ತನ್ನಲ್ಲಿ ಈ ಸಂಸ್ಕಾರ ಇದ್ದಿದ್ದರೆ ತನ್ನ ಮಗನಿಗೂ ಬರುತ್ತಿತ್ತು ಎಂದೆನಿಸಿ ಬೇಸರವಯಿತು.ಹಾಗೆ ಅಲ್ಲಿಯ ಮಕ್ಕಳನ್ನು ನೋಡುತ್ತಾ ನಿಂತುಬಿಟ್ಟ.
ಸಾಲುಸಾಲಗಿ ನಿಂತ ಆ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದ ಚಿದಾನಂದ ವಿಶ್ವೇಶ್‍ಗೆ ಬದುಕನ್ನು ಸಮರ್ಥವಾಗಿ ನೆಡೆಸುತ್ತಿರುವ ಪುಂಗವನಂತೆ ಕಂಡನು.ಪ್ರೀತಿಯಿಂದ ತಾವು ತಂದಿದ್ದ ಊಟವನ್ನು ಕುಟುಂಬ ಸಮೇತ ಬಡಿಸುತ್ತಿದ್ದದನ್ನು ನೋಡಿ ತನ್ನ ಬದುಕು ಅದೆಷ್ಟೋ ವರ್ಷಗಳ ಹಿಂದೆಯೇ ಸ್ತಬ್ಧವಾದಂತೆ ಭಾಸವಾಯಿತು.ಹಾಗೆಯೇ ಚಿದಾನಂದನ ಮುಖ ನೋಡುತ್ತಾ ನಿಂತಿದ್ದ ಅವನಿಗೆ "ವಿಶ್ವ...ಇಲ್ಲಿ ಬಾರೋ...ಸ್ವೀಟ್ ಹಾಕುವಂತೆ" ಎಂಬ ಚಿದಾನಂದನ ದನಿ ಎಚ್ಚರಿಸಿತು.
"ಮಾಮ...ಇನ್ನೊಂದು ಹಾಕ್ತೀರಾ.." ಎಂದು ಸುಮಾರು ಮೂರು-ನಾಲ್ಕು ವರ್ಷದ ಬಾಲಕಿಯೊಬ್ಬಳು ಕೇಳಿದಾಗ  ವಿಶ್ವೇಶ್ ಅವಳಿಗೆ ಮತ್ತೊಂದು ಸ್ವೀಟ್ ಬಡಿಸಿದ.ಆಗ ಆಕೆಯ ಮುಖದಲ್ಲಿ ಆದ ಸಂತೋಷವನ್ನು ಕಂಡು ಆತನ ಕಣ್ಣು ತುಂಬಿ ಬಂತು.ತನ್ನ ಮನೆ,ಕಾರು,ಪ್ರತಿಷ್ಟೆ ಎಲ್ಲ ಸೇರಿಸಿದರೂ ಸಿಗದಷ್ಟು ಖುಷಿಯಾಯಿತು ಆತನಿಗೆ.ಹಾಗೆಯೇ ನಿಂತವನಿಗೆ ಮತ್ತೆ ಎಚ್ಚರವಾದದ್ದು ಆತನ ಸ್ಮಾರ್ಟ್‍ಪೋನ್ ರಿಂಗಣಿಸಿದಾಗಲೇ.
ಆ ಕಡೆಯಿಂದ ಅದೇನೂ ಹೇಳಿದರೋ ಗೊತ್ತಿಲ್ಲ ಆದರೆ ಈ ಕಡೆಯಿಂದ ಮಾತ್ರ ವಿಶ್ವೇಶ್ ಗದ್ಗದಿತನಾಗಿ "ನಾನು ಯಾವ ಆಸ್ತಿಯನ್ನು ಮಾರಲ್ಲ...ಇನ್ನು ನಂಗೆ ಕಾಲ್ ಮಾಡಬೇಡಿ.." ಎಂದು ನಿಖರವಾಗಿ ಹೇಳಿದನು.
ಇದನ್ನೆಲ್ಲಾ ನೋಡುತ್ತಿದ್ದ ಚಿದಾನಂದ "ಏನಾಯ್ತೋ....?ಮತ್ತೆ ನಿನ್ನ ಬೆಲೆಗೆ ಒಪ್ಪಲಿಲ್ವ??" ಎಂದಾಗ "ಇಲ್ಲ ಕಣೋ ಈ ಬಾರಿ ಸರಿಯಾಗಿ ನಿರ್ಧಾರ ಮಾಡಿದ್ದೀನಿ...ನಾನು ಆ ಆಸ್ತಿ ಮಾರಲ್ಲ.....ಬದಲಿಗೆ ಈ ವನಸುಮಕ್ಕೆ ಬರೆದು ಕೊಡ್ತೀನಿ.....ಇದು ಈ ಮಕ್ಕಳಿಗೆ ಈ ಅಲ್ಪ ಮಾಡುತ್ತಿರುವ ಅಳಿಲು ಸೇವೆ.." ಎಂದು ಹೇಳುತ್ತಾ ಚಿದಾನಂದನ್ನು ಗಟ್ಟಿಯಾಗಿ ತಬ್ಬಿಕೊಂಡನು.
 

Saturday 19 September 2015

ಧಾವಂತ

ಧಾವಂತ

"ವಿನ್ಯಾಸವಿಲ್ಲ.....ಬರೀ ಧಾವಂತ.....ಕ್ಷಣದಲ್ಲಿ ಬದುಕು ಕಟ್ಟಿಕೊಳ್ಳಬೇಕು......" ಪ್ರಜ್ಞಾನಂದರಾಯರು ಹೇಳುತ್ತಲೇ ಒಳಗೆ ಬಂದರು."ನಗರದ ಬದುಕು....ನಾಗರೀಕರ ಬದುಕು....."  
    "ಶುರುವಾಯ್ತಾ ಅಪ್ಪಾ ನಿಂದು...."ಮಗಳು ಕ್ಷಿಪ್ರ ಗುಡುಗಿದಳು.ಅಪ್ಪನ ಪ್ರಜ್ಞೆಯ ಮಾತುಗಳು ಆಕೆಗೆ ಅಜೀರ್ಣ.ಅಲ್ಲದೆ ಪ್ರಜ್ಞಾನಂದರಾಯರು ಯಾವಾಗಲೂ ಇಂತಹ ಏನಾದರೂ ವಿಷಯವನ್ನು ಹೇಳುತ್ತಲೇ ಇರುತ್ತಾರೆ.ಯಾಕೋ ರಾಯರು ಮುಖ ಸಣ್ಣಗೆ ಮಾಡಿದರು.ಮಗಳಿಗೆ ಸ್ವಲ್ಪ ಇರುಸುಮುರುಸಾಗಿ "ಯಾಕಪ್ಪ....ಏನಾಯ್ತು??"
"ಏನಿಲ್ಲ ಪುಟ್ಟಾ....ಯಾಕೋ ಹೀಗೆ ಅನ್ನಿಸ್ತು...ನಿನ್ನ ಬದುಕು ಹಾಗೆ ಅಲ್ವ??"
"ಹೌದು ಅಪ್ಪಾ...ಇಲ್ಲಿ ಎಲ್ಲರ ಬದುಕು ಹಾಗೆ....ಇಲ್ಲಿ ಎಲ್ಲಾ ಫಾಸ್ಟ್ ಆಗಿ ಆಗಬೇಕು....ನಾವು ಹೊಂದಿಕೊಳ್ಳಲೇ ಬೇಕು..."
    "ಮಿತಿಯಿಲ್ಲದ ವೇಗ....ಅದೇ ಸಮಸ್ಯೆ...."ರಾಯರ ಮುಖದಲ್ಲಿ ನಗು.
"ಫಾಸ್ಟ್ ಪುಡ್ ಕಾಲ ಅಪ್ಪಾ ಇದು....ಇಲ್ಲಿ ನಿನಗೆ ಏನು ಬೇಕೋ ಅದು ಕ್ಷಣದಲ್ಲಿ ಸಿಗುತ್ತೆ..." ಕ್ಷಿಪ್ರ ಉತ್ತರಿಸಿದಳು.
"ಸುಖಕ್ಕೆ ಬರವಿಲ್ಲ.....ಆದರೆ ಸೌಖ್ಯಕ್ಕೆ...." ಮತ್ತೆ ನಕ್ಕರು ರಾಯರು.
    ಅಪ್ಪನ ಮಾತುಗಳು ಪುರಾಣ ಎನಿಸುತ್ತಿದ್ದ ಕ್ಷಿಪ್ರಾಳಿಗೆ ಅದೇಕೋ ಅಪ್ಪನ ಮಾತುಗಳು ಸರಿಯೆನಿಸತೊಡಗಿತು.ಹಾಗೆಯೇ ಅಪ್ಪನ ಮಾತು ಕೇಳುತ್ತಾ ಕುಳಿತುಬಿಟ್ಟಳು.
"ಬದುಕಿನಲ್ಲಿ ಯಾಂತ್ರಿಕತೆ ಬೇಕು...ಆದರೆ ಬದುಕೇ ಯಂತ್ರಿಕವಾದರೆ??ಅರ್ಥವಿರೋಲ್ಲ ಅಲ್ವ....."
ಕ್ಷಿಪ್ರಳಿಗೆ ಉತ್ತರ ತೋಚಲಿಲ್ಲ.ಮನಸ್ಸಿನಲ್ಲಿ ಏನೋ ತಳಮಳ.ತಿಂಗಳಿಗೆ ಆರಂಕಿಯ ಸಂಬಳ,ವಾಸಕ್ಕೆ ಒಂದು ಪ್ಲಾಟ್,ಆದರೂ ಬದುಕು ತುಂಬ ಸಣ್ಣದು ಎಂಬ ವಿಚಾರ ಅವಳನ್ನು ಸದಾ ಕಾಡುತ್ತಿತ್ತು.
"ಆದರೆ ಈಗಿನ ಬದುಕೇ ಹೀಗೆ ಅಪ್ಪ....ಯಾವಾಗಲೂ ಚುರುಕಾಗಿ ಇರಬೇಕು....ಸ್ವಲ್ಪ ನಿಧಾನವಾದರೂ ಹಿಂದೆ ಉಳಿದು ಬಿಡುತ್ತೇವೆ...." ಮಗಳ ಸಮರ್ಥನೆ.
"ಎಲ್ಲರಿಗೂ ತಾವೇ ಶ್ರೇಷ್ಠ ಅನ್ನೋ ಭಾವನೆ.....ಬೇರೆಯವರ ಭಾವನೆಗಳನ್ನು ಗೌರವಿಸಬೇಕು ಅನ್ನೋ ಕನಿಷ್ಠ ಸೌಜನ್ಯವು ಇಲ್ಲದವರು....ನಗರದ ಬದುಕು ನಾಗರೀಕರ ಬದುಕು" ಮತ್ತೆ ನಕ್ಕರು ರಾಯರು. "ನಮ್ಮಲ್ಲಿ ಇರುವ ಜ್ಞಾನ ಬೇರೆಯವರಲ್ಲಿ ಅಜ್ಞಾನ ಇದೆ ಅನ್ನೋದಕ್ಕೆ ಉಪಯೋಗವಾಗಬಾರದು....ಬದಲಿಗೆ ಅವರಲ್ಲಿ ಇರುವ ಅಜ್ಞಾನದ ಪೊರೆ ಕಳಚುವುದಕ್ಕೆ ಉಪಯೋಗವಾಗಬೇಕು...."
ಅಪ್ಪನ ಈ ಮತುಗಳು ಮಗಳಿಗೆ ತಪ್ಪು ಎನ್ನಲಾಗಲಿಲ್ಲ."ಆದರೆ....." ಸಮರ್ಥಿಸಿಕೊಳ್ಳಬೇಕು ಎಂದೆನಿಸಿದರು ಮಾತುಗಳು ಬರಲಿಲ್ಲ.
"ಒಂದೇ ಅಪಾರ್ಟ್‍ಮೆಂಟಿನಲ್ಲಿ ಇದ್ದರೂ ಪಕ್ಕದಲ್ಲಿ ಯಾರು ಇದ್ದಾರೆ ಅಂತಾನೆ ಗೊತ್ತಿರಲ್ಲ.....ಜಾಗತೀಕರಣದ ಮಾತು ಆಡುತ್ತೇವೆ.....ಆದರೆ ಜೀವನ ಎಷ್ಟು ಸಂಕುಚಿತವಾಗಿದೆ ಅಲ್ವ.....ಮನಸ್ಸಿನ ಭಾವನೆಗಳನ್ನು ಭಿತ್ತರಿಸುವುದಕ್ಕೆ ನೆರವಾಗುವ ಸಾಮಾಜಿಕ ಜಾಲತಾಣಗಳು,ಅದರ ಮೂಲಕವೇ ಆ ಭಾವನೆಗಳಿಗೆ ಪ್ರತಿಕ್ರಿಯೆಯೂ ಬಂದುಬಿಡುತ್ತದೆ....ಎಂತಹ ಸೋಜಿಗ ಅಲ್ಲವಾ..??" ಪ್ರಜ್ಞಾನಂದರಾಯರ ಪ್ರಜ್ಞೆಯ ಮಾತುಗಳು ಧಾವಂತದ ಬದುಕಿನಲ್ಲಿ ವಿಲೀನಳಾಗಿದ್ದ ಕ್ಷಿಪ್ರಳಿಗೆ ಯೋಚಿಸುವಂತೆ ಮಾಡಿತ್ತು.
"ಹೌದು ಅಪ್ಪಾ ಇಲ್ಲಿ ಎಲ್ಲಾ ಹೀಗೆ.....ಯಾರಿಗೂ ಸಮಯ ಇಲ್ಲ ಇದ್ದರೂ ತಾಳ್ಮೆ ಇಲ್ಲ..ತಂತ್ರಜ್ಞಾನ ಇಷ್ಟು ಮುಂದುವರಿದಿದೆ...ಹಾಗಾಗಿ ಆ ತಂತ್ರಜ್ಞಾನದ ಉಪಯೋಗ ಆಗುತ್ತಾ ಇದೆ ಅಷ್ಟೇ...." ಮಗಳ ಸಮರ್ಥನೆ.
"ಬರೀ ನಾಗರೀಕತೆ...ವಿಕಾಸ ಇಲ್ಲ.....ನಮ್ಮ ಹೊರಗೆ ಆಗುವುದು ನಾಗರೀಕತೆ....ಅದೇ ನಮ್ಮ ಒಳಗೆ ಆಗುವುದು ವಿಕಾಸ....ಹೊರಗೆ ಎಷ್ಟೇ ಝಗಮಗಿಸುವ ಬೆಳಕು ಇದ್ದರೂ ಮನಸ್ಸಲ್ಲಿ ಕತ್ತಲೆ ಇದ್ದರೆ ಅದು ಹಾಗೆ ಉಳಿದುಬಿಡುತ್ತೆ....ಅದೇ ಮನಸ್ಸು ಬೆಳಕಿನಲ್ಲಿ ಇದ್ದರೆ ಹೊರಗೆ ಕತ್ತಲಿದ್ದರೂ ಅಳಿಸುವ ಪ್ರಯತ್ನ ಮಾಡಬಹುದು....." ಉತ್ತರ ಕೊಡಲು ಕಷ್ಟವಾಗುವ ಪ್ರಶ್ನೆಗಳಿಗೆ ಕ್ಷಿಪ್ರಾಳ ಬಳಿ ಉತ್ತರವಿಲ್ಲ.
"ಆದರೆ ಇದಕ್ಕೆಲ್ಲಾ ಏನು ಪರಿಹಾರ ಅಪ್ಪ...ಬದಲಾವಣೆ ಆಗುವುದಾದರೂ ಹೇಗೆ??" ಏನೂ ತೋಚದ ಮಗಳು ಅಪ್ಪನ ಮಾತುಗಳು ಸರಿಯೆನಿಸಿ ಉತ್ತರದ ಮೊರೆ ಹೋದಳು.
"ಗೊತ್ತಿಲ್ಲ ಪುಟ್ಟಾ....ಇದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ.....ಜಗಳವಾದರೆ ಅದನ್ನು ಚಿತ್ರೀಕರಿಸಿ ನಾಲ್ಕು ಜನರಿಗೆ ತೋರಿಸಿ ಪ್ರಶಂಸೆ ಗಿಟ್ಟಿಸಿಕೊಳ್ಳುವ ಮನೋಭಾವ ಹೋಗಬೇಕು....ವಿಕೃತಿ ಹೋಗಬೇಕು.....ವಿಕಾಸವಾಗಬೇಕು.....ಮನುಷ್ಯ ಮನುಷ್ಯನಾಗಿಯೇ ಉಳಿಯಬೇಕು....ಯಂತ್ರಗಳನ್ನು ತಯಾರು ಮಾಡುವ ಭರದಲ್ಲಿ ಮನುಷ್ಯನೇ ಯಂತ್ರವಾದರೆ ಕಷ್ಟ....ಬಹಳ ಕಷ್ಟ.......ನಗರದ ಬದುಕು...ನಾಗರೀಕರ ಬದುಕು" ಎಂದು ನಗುತ್ತಾ ರಾಯರು ನಿಟ್ಟುಸಿರುಬಿಟ್ಟರು.
ಆದರೆ ಕ್ಷಿಪ್ರಾಳ ತಳಮಳ ಹಾಗೆಯೇ ಉಳಿದುಬಿಟ್ಟಿತು.